ಜಿಎಸ್ಟಿ ದರ ಹೆಚ್ಚಳ ಕೇವಲ ವದಂತಿ : ಸಚಿವೆ ನಿರ್ಮಲಾ ಸೀತಾರಾಮನ್
Team Udayavani, Dec 14, 2019, 6:38 AM IST
ಹೊಸದಿಲ್ಲಿ: ‘ಜಿಎಸ್ಟಿ ದರಗಳನ್ನು ಹೆಚ್ಚಳ ಮಾಡುವ ವಿಚಾರ ನನ್ನ ಕಚೇರಿಗಿಂತ ಹೊರಗಡೆಯೇ ಹೆಚ್ಚು ಸದ್ದು ಮಾಡುತ್ತಿದೆ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಎಸ್ಟಿ ಸ್ಲಾಬ್ ದರಗಳಲ್ಲಿ ಗಣನೀಯವಾಗಿ ಹೆಚ್ಚಳ ವಾಗುವ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜಿಎಸ್ಟಿ ಮಂಡಳಿ ಸಭೆ ಡಿ.18ರಂದು ನಡೆಯಲಿದೆ. ಇದೇ ವೇಳೆ, ರಾಜ್ಯಗಳಿಗೆ ನೀಡಬೇಕಿ ರುವ ಜಿಎಸ್ಟಿ ಪರಿಹಾರ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದರು.
ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಯಾ ಕಾಲಕ್ಕೆ ಅನುಗುಣವಾಗಿ ಸಮರ್ಪಕವಾದ ಪ್ಯಾಕೇಜ್ಗಳನ್ನು ನಾವು ಇತ್ತೀಚೆಗೆ ಘೋಷಿಸುತ್ತಾ ಬಂದಿದ್ದೇವೆ. ಆವಶ್ಯಕತೆಯಿದ್ದಾಗ ಮಾತ್ರ ಬೇಕಷ್ಟು ಆರ್ಥಿಕ ಪರಿಹಾರಗಳನ್ನು ಘೋಷಿಸಲಾಗುತ್ತದೆ’ ಎಂದು ಹೇಳಿದರು.