ಡ್ಯೂಟಿ ಅವಧಿ ಮುಗಿದಿದೆ ಎಂದು ರನ್ ವೇನಲ್ಲಿ ವಿಮಾನ ಬಿಟ್ಟು ಹೋದ ಪೈಲಟ್
Team Udayavani, Nov 10, 2017, 5:37 PM IST
ನವದೆಹಲಿ: ಜೈಪುರದಿಂದ ದೆಹಲಿಗೆ ಹೊರಡಲು ವಿಮಾನವೊಂದು ರೆಡಿಯಾಗಿತ್ತು, ಆದರೆ ವಿಮಾನ ಇನ್ನೇನು ಟೇಕ್ ಆಫ್ ಆಗುತ್ತೆ ಎಂದು ಕಾದು ಕುಳಿತಿದ್ದ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ಅದೇನಪ್ಪಾ ಅಂದರೆ ತನ್ನ ಕೆಲಸದ ಅವಧಿ ಮುಗಿಯಿತು ಎಂದು ಪೈಲಟ್ ವಿಮಾನದಿಂದ ಇಳಿದು ಹೊರಟೇಬಿಟ್ಟಿದ್ದ!
ಡಿಎನ್ ಎ ಪತ್ರಿಕೆಯ ವರದಿ ಪ್ರಕಾರ, ಲಕ್ನೋದಿಂದ ಜೈಪುರದ ಮೂಲಕ ದೆಹಲಿಗೆ ಈ ವಿಮಾನ ಪ್ರಯಾಣ ಬೆಳೆಸಬೇಕಿತ್ತು. ಆದರೆ ನನ್ನ ಡ್ಯೂಟಿ ಸಮಯ ಮುಗಿದಿದೆ ಎಂದು ಹೇಳಿ ಪೈಲಟ್ ಹೊರಟೇ ಬಿಟ್ಟಿದ್ದ, ಇದರಿಂದಾಗಿ ಸುಮಾರು 40 ಮಂದಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಅಧಿಕಾರಿಗಳ ಪ್ರಕಾರ, ಕೆಲವರು ಬಸ್ ಮೂಲಕ ದೆಹಲಿಗೆ ಹೊರಟಿದ್ದರು, ಕೆಲವರಿಗೆ ಹೋಟೆಲ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು, ಉಳಿದ ಪ್ರಯಾಣಿಕರಿಗೆ ಗುರುವಾರ ಬೆಳಗ್ಗೆ ವಿಮಾನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿತ್ತು ಎಂದು ತಿಳಿಸಿದ್ದಾರೆ.
ಪೈಲಟ್ ಡ್ಯೂಟಿ ಅವಧಿ ಮುಗಿದಿದ್ದರಿಂದ ಆತ ಮತ್ತೆ ವಿಮಾನ ಚಾಲನೆಗೆ ಒಪ್ಪಲಿಲ್ಲ ಎಂದು ಜೈಪುರ್ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ಬಾಲ್ ಹರಾ ಅವರು ಹೇಳಿದ್ದಾರೆ. ಡೈರೆಕ್ಟರೇಟ್ ಜನರಲ್ ಸಿವಿಲ್ ಏವಿಯೇಷನ್ ಕಾಯ್ದೆಯನ್ವಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಅವಧಿಯ ಡ್ಯೂಟಿ ಮಾಡುವಂತಿಲ್ಲ ಎಂದು ವಿವರಿಸಿದ್ದಾರೆ.