ಕೋವಿಡ್ ಸಂಬಂಧಿತ ಸುಳ್ಳು ಸುದ್ದಿ : ಪಿಂಚಣಿ ಕಡಿತ ಬರೀ ವದಂತಿ
Team Udayavani, Apr 19, 2020, 5:11 PM IST
ನವದೆಹಲಿ: ಕೋವಿಡ್ ನಿಂದಾಗಿ ಜಗತ್ತಿನಾದ್ಯಂತ ಅನೇಕರು ಉದ್ಯೋಗ ಕಳೆದುಕೊಳ್ಳುವ ಮತ್ತು ವೇತನ ಕಡಿತದ ಭೀತಿಯಲ್ಲಿರುವಾಗಲೇ, ವ್ಯಾಟ್ಸ್ ಆ್ಯಪ್ನಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡಲಾರಂಭಿಸಿದೆ.
ಕೇಂದ್ರ ಸರಕಾರವು ನೌಕರರ ಪಿಂಚಣಿಯನ್ನು ಶೇ.30ರಷ್ಟು ಕಡಿತಗೊಳಿಸಲು ತೀರ್ಮಾನಿಸಿದ್ದು, 80 ವರ್ಷ ದಾಟಿದವರಿಗೆ ಪಿಂಚಣಿಯನ್ನೇ ನೀಡದಿರಲು ನಿರ್ಧರಿಸಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್ ವೈರಸ್ ವಿರುದ್ಧ ಹೋರಾಡಲು ಸಾಕಷ್ಟು ಹಣಕಾಸಿನ ಅಗತ್ಯವಿರುವ ಕಾರಣ, ಸರಕಾರವು ಪಿಂಚಣಿ ನಿಧಿಯ ಮೊತ್ತವನ್ನು ಆರೋಗ್ಯ ಸೇವೆಗೆ ವರ್ಗಾಯಿಸಲಿದೆ ಎಂದೂ ಈ ಸಂದೇಶದಲ್ಲಿ ತಿಳಿಸಲಾಗಿದೆ.
ಇದನ್ನು ನಂಬಿದ ಅನೇಕರು ಭೀತಿಗೊಳಗಾಗಿದ್ದಾರೆ. ಆದರೆ, ಇದೊಂದು ಸತ್ಯಕ್ಕೆ ದೂರವಾದ ಮಾಹಿತಿ. ಸರಕಾರವು ಅಂಥ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಕೇಂದ್ರ ಸರಕಾರದ ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೋ ಕೂಡ ಇದೊಂದು ಸುಳ್ಳು ಸುದ್ದಿ ಎಂಬುದನ್ನು ಸ್ಪಷ್ಟಪಡಿಸಿದೆ.