ಲಕ್ಷ್ಮೀ ವಿಲಾಸ್ ಬ್ಯಾಂಕ್ಗೆ ಈಗ ಮೊರಟೋರಿಯಂ ಬಿಸಿ
ಕೇಂದ್ರದಿಂದ ಮಹತ್ವದ ನಿರ್ಧಾರ, ಕೇವಲ 25 ಸಾವಿರ ರೂ. ವಿತ್ಡ್ರಾಗೆ ಅವಕಾಶ, ಡಿಸೆಂಬರ್ 16ರ ವರೆಗೆ ಈ ಆದೇಶ ಅನ್ವಯ
Team Udayavani, Nov 18, 2020, 12:43 AM IST
ಹೊಸದಿಲ್ಲಿ: ತಮಿಳುನಾಡು ಮೂಲದ ಲಕ್ಷ್ಮೀ ವಿಲಾಸ ಬ್ಯಾಂಕ್ ಲಿಮಿಟೆಡ್ ಅನ್ನು ಕೇಂದ್ರ ಸರ್ಕಾರ ಮೊರಟೋರಿಯಂಗೆ ಒಳಪಡಿಸಿದೆ. ಆರ್ಬಿಐನ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬ್ಯಾಂಕಿನ ಗ್ರಾಹಕರು ಡಿ.16ರವರೆಗೆ ಕೇವಲ 25 ಸಾವಿರ ರೂ. ವಿತ್ಡ್ರಾ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಆದರೆ, ಗ್ರಾಹಕರು ಆರ್ಬಿಐಗೆ ಅರ್ಜಿ ಮೂಲಕ ಮನವಿ ಸಲ್ಲಿಸಿ ಹೆಚ್ಚಿನ ಹಣ ವಿತ್ಡ್ರಾ ಮಾಡಿಕೊಳ್ಳಬಹುದು. ಅಂದರೆ, ವೈದ್ಯಕೀಯ ವೆಚ್ಚ, ಶೈಕ್ಷಣಿಕ ಶುಲ್ಕ, ಮದುವೆಗಳಂತ ಸನ್ನಿವೇಶದಲ್ಲಿ ಗ್ರಾಹಕರಿಗೆ 25 ಸಾವಿರ ರೂ.ಗಿಂತ ಹೆಚ್ಚು ಹಣ ವಾಪಸ್ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಈ ಬ್ಯಾಂಕು ನಷ್ಟ ಅನುಭವಿಸಿಕೊಂಡು ಬರುತ್ತಿದೆ. ಲಾಭದ ಹಾದಿ ತರಲು ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಹಾಗೆಯೇ, ಬ್ಯಾಂಕಿನ ಎನ್ಪಿಎ ಕೂಡ ಹೆಚ್ಚಾಗುತ್ತಿದೆ. ಮುಂದೆಯೂ ಇನ್ನಷ್ಟು ನಷ್ಟ ಹೆಚ್ಚುವ ಭೀತಿ ಇರುವುದರಿಂದ ಮೊರಟೋರಿಯಂಗೆ ಶಿಫಾರಸು ಮಾಡಲಾಗಿದೆ ಎಂದು ಆರ್ಬಿಐ ಹೇಳಿದೆ.
ಇನ್ನು ಲಕ್ಷ್ಮೀ ವಿಲಾಸ ಬ್ಯಾಂಕನ್ನು ಸಿಂಗಾಪೂರ ಮೂಲದ ಡಿಬಿಎಸ್ ಇಂಡಿಯಾದಲ್ಲಿ ವಿಲೀನ ಮಾಡುವ ಬಗ್ಗೆ ಆರ್ಬಿಐ ಕರಡು ಯೋಜನೆಯನ್ನೂ ಪ್ರಕಟಿಸಿದೆ. ಸದ್ಯ ಡಿಬಿಎಸ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಉತ್ತಮವಾಗಿದೆ ಎಂದು ಅದು ತಿಳಿಸಿದೆ.