ದುಬಾೖ, ಇರಾನ್ನಿಂದ ಈರುಳ್ಳಿ : ಬೆಲೆ ಏರಿಕೆ ತಡೆಯಲು ಮುಂದಾದ ಕೇಂದ್ರ ಸರಕಾರ
Team Udayavani, Nov 9, 2019, 7:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಪ್ರವಾಹದಿಂದಾಗಿ ದೇಶದ ಮಾರುಕಟ್ಟೆಗಳಲ್ಲಿ ಏರಿಕೆಯಾಗಿರುವ ಈರುಳ್ಳಿ ಬೆಲೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರಕಾರ ಈಗ ದುಬಾೖ ಸೇರಿದಂತೆ ವಿದೇಶಗಳಿಂದ ಅದನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಸರಕಾರಿ ಸ್ವಾಮ್ಯದ ಲೋಹ ಮತ್ತು ಖನಿಜ ವ್ಯಾಪಾರ ಮಂಡಳಿ (ಎಂಎಂಟಿಸಿ) ಇತರ ರಾಷ್ಟ್ರಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ವ್ಯವಸ್ಥೆಯ ನೇತೃತ್ವ ವಹಿಸಲಿದೆ ಮತ್ತು ಅದಕ್ಕಾಗಿ ಟೆಂಡರ್ ಕರೆಯಲಾಗಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್ ಕೆ. ಶ್ರೀವಾಸ್ತವ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸದಿಲ್ಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರತಿ ಕೆಜಿ ಈರುಳ್ಳಿಗೆ 100 ರೂ. ವರೆಗೆ ಬೆಲೆ ಏರಿಕೆಯಾಗಿತ್ತು.
ಎಂಎಂಟಿಸಿ, ನಾಫೆಡ್, ಕೃಷಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ತಂಡ ಈಜಿಪ್ಟ್, ಟರ್ಕಿಗೆ ಶೀಘ್ರದಲ್ಲಿಯೇ ಭೇಟಿ ನೀಡಿ, ಅಲ್ಲಿಂದ ಈರುಳ್ಳಿ ಖರೀದಿ ಮಾಡುವ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ. ಖಾಸಗಿ ಯಾಗಿಯೂ ಇರಾನ್, ಅಫ್ಘಾನಿಸ್ಥಾನಗಳಿಂದಲೂ ಈರುಳ್ಳಿ ಖರೀದಿಗೆ ಚಿಂತನೆ ನಡೆಸಲಾಗುತ್ತಿದೆ. ಅದಕ್ಕಾಗಿ ನ.30ರವರೆಗೆ ಕೆಲ ನಿಯಮಗಳನ್ನು ಸಡಿಸಲಾಗಿದೆ. ಜತೆಗೆ ಟೆಂಡರ್ ಪ್ರಕ್ರಿಯೆಗೆ ಬೇಕಾಗುವ ನಿಯಮಗಳ ಸಡಿಲಿಕೆಗೆ ಕೂಡ ಒಪ್ಪಿಗೆ ನೀಡಲಾಗಿದೆ.