ಯೆಸ್ ಬ್ಯಾಂಕ್ ಬಿಕ್ಕಟ್ಟು ಶೀಘ್ರ ಶಮನ, ಆತಂಕ ಬೇಡ ಎಂದ ನಿರ್ಮಲಾ ಸೀತಾರಾಮನ್
Team Udayavani, Mar 6, 2020, 4:22 PM IST
ಹೊಸದಿಲ್ಲಿ: ಯೆಸ್ ಬ್ಯಾಂಕ್ ಖಾತೆದಾರರ ಹಣ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಆತಂಕ ಬೇಡ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಖಾಸಗಿ ವಲಯದ ಯೆಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ತನ್ನ ಸುಪರ್ದಿಗೆ ಪಡೆದಿತ್ತು. ಖಾತೆದಾರರು 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಪಡೆಯುವಂತಿಲ್ಲ ಎಂದು ಮಿತಿ ಹೇರಿತ್ತು. ಈ ಬೆಳವಣಿಗೆಯಿಂದ ಯೆಸ್ ಬ್ಯಾಂಕ್ ಖಾತೆದಾರರು ಆತಂಕಕ್ಕೆ ಒಳಗಾಗಿದ್ದರು.
ಇದೀಗ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ್ದು, ಬ್ಯಾಂಕ್ ನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಆರ್ ಬಿಐ ಅಧಿಕಾರಿಗಳ ಜೊತೆಗೆ ಈಗಾಗಲೇ ಮಾತನಾಡಿದ್ದೇನೆ. ಆದಷ್ಟು ಬೇಗ ಈ ಬಿಕ್ಕಟ್ಟು ಶಮನವಾಗಲಿದ್ದು, ಯಾವುದೇ ಖಾತೆದಾರನ ಹಣ ನಷ್ಟವಾಗುವುದಿಲ್ಲ. ಎಲ್ಲರ ಹಣ ಸುರಕ್ಷಿತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಆರ್ ಬಿಐ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಹೇಳಿದ್ಧಾರೆ.