ಉತ್ಪಾದನೆ ತಗ್ಗಿದ್ದಕ್ಕೆ ಈರುಳ್ಳಿ ದರ ಏರಿಕೆ
Team Udayavani, Nov 6, 2019, 9:36 PM IST
ನವದೆಹಲಿ: ಈರುಳ್ಳಿ ದಾಸ್ತಾನು ಕಡಿಮೆಯಾಗಿರುವುದಕ್ಕೆ ದರ ಏರಿಕೆಯಾಗಿದೆ. ಬೆಲೆ ಇಳಿಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ದಿಢೀರನೇ ಈರುಳ್ಳಿ ದರ ಕೇಜಿಗೆ 80 ರೂ. ತಲುಪಿದ ಹಿನ್ನೆಲೆಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಅವರು, ಕೆಲವು ರಾಜ್ಯಗಳಲ್ಲಿ ಮುಂಗಾರು ವಿಳಂಬ ಹಾಗೂ ಪ್ರವಾಹದಿಂದ ಶೇ.30-40 ಈರುಳ್ಳಿ ಉತ್ಪಾದನೆ ಇಳಿಕೆಯಾಗಿದೆ. ಹೀಗಾಗಿ ದರ ಹೆಚ್ಚಾಗಿದೆ. ಇದನ್ನು ತಗ್ಗಿಲು ಸರ್ಕಾರ ಗರಿಷ್ಠ ಪರಿಣಾಮಕಾರಿ ಕ್ರಮ ಕೈಗೊಳ್ಳಲಿದೆ ಎಂದರು.
ಯಾವಾಗ ದರ ಇಳಿಯುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಭವಿಷ್ಯ ನುಡಿಯಲು ನಾನು ಜೋತಿಷಿ ಅಲ್ಲ. ನವೆಂಬರ್ ಅಂತ್ಯ ಇಲ್ಲವೇ ಡಿಸೆಂಬರ್ಗೆ ಬೆಲೆ ಇಳಿಯುವ ವಿಶ್ವಾಸವಿದೆ ಎಂದು ತಿಳಿಸಿದರು.