14,000 ಅಭ್ಯರ್ಥಿಗಳಿಗೆ ಉದ್ಯೋಗ ನೀಡುತ್ತಿದ್ದೇವೆ: ಚಿದಂಬರಂ ಟೀಕೆಗೆ ಎಸ್ಬಿಐ ಸ್ಪಷ್ಟನೆ
ಕೋವಿಡ್ ವೇಳೆ ವಿಆರ್ಎಸ್ ಯೋಜನೆ ಕ್ರೂರ ಎಂದಿದ್ದ ಚಿದಂಬರಂ
Team Udayavani, Sep 9, 2020, 6:09 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲೇ ಸಾಲ ನೀಡುವ ಬೃಹತ್ ಬ್ಯಾಂಕ್ ಎನಿಸಿಕೊಂಡಿರುವ ಎಸ್ಬಿಐ, ಇತ್ತೀಚೆಗಷ್ಟೇ ಹೊಸತಾಗಿ ಸ್ವಯಂನಿವೃತ್ತಿ ಯೋಜನೆಯೊಂದನ್ನು ಪ್ರಕಟಿಸಿತ್ತು. ಅದರ ವಿರುದ್ಧ ಕೇಂದ್ರದ ಮಾಜಿ ವಿತ್ತಸಚಿವ ಪಿ.ಚಿದಂಬರಂ ತೀವ್ರವಾಗಿ ಹರಿಹಾಯುತ್ತಿದ್ದಂತೆ, ಎಸ್ಬಿಐ ಸ್ಪಷ್ಟೀಕರಣ ನೀಡಿದೆ. ತನಗೆ ಯಾರನ್ನೂ ಕೆಲಸದಿಂದ ಕಿತ್ತು ಹಾಕುವ ಯೋಚನೆಯಿಲ್ಲ. ಅದು ಕೇವಲ ಸ್ವಯಂನಿವೃತ್ತಿ ಯೋಜನೆ ಮಾತ್ರ. ಇದರ ಬದಲು ಹೊಸತಾಗಿ 14,000 ಮಂದಿಗೆ ಈ ವರ್ಷ ಉದ್ಯೋಗ ನೀಡುತ್ತಿದ್ದೇವೆ ಎಂದು ಎಸ್ಬಿಐ ಹೇಳಿದೆ.
ಬೇರೆ ಬೇರೆ ಕಾರಣಕ್ಕೆ ಯಾರಿಗೆ ಮುಂದುವರಿಯಲು ತೊಂದರೆಯಾಗುತ್ತಿದೆಯೋ ಅಂತಹವರಿಗಾಗಿ ನಾವು ಯೋಜನೆ ಮಾಡಿದ್ದೇವೆ. ಈ ಯೋಜನೆಯಡಿ ನಿವೃತ್ತರಾದರೆ, ಬಾಕಿ ಸೇವಾವಧಿ ಪೂರ್ಣ ಅರ್ಧ ಸಂಬಳ ನೀಡಲಾಗುವುದು ಎಂದು ಎಸ್ಬಿಐ ಹೇಳಿದೆ.
ಚಿದಂಬರಂ ಹೇಳಿದ್ದೇನು?: ದೇಶದ ಅಗ್ರ ಬ್ಯಾಂಕ್ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡರೆ, ಮಾಮೂಲಿ ಸಂಸ್ಥೆಗಳು ಏನು ಮಾಡಬಹುದು? ಇದು ಉದ್ಯೋಗಿಗಳ ಪಾಲಿಗೆ ಅತ್ಯಂತ ಕ್ರೂರ ನಿರ್ಧಾರ. ಮೇಲ್ನೋಟಕ್ಕೆ ಇದು ಸ್ವಯಂನಿವೃತ್ತಿಯಂತೆ ಕಾಣುತ್ತಿದೆ. ನಿಜಕ್ಕೂ ಅದು ಹಾಗೆಯೇ ಆಗಿದ್ದರೆ, ನಿರ್ದಿಷ್ಟವಾಗಿ 30,190 ಮಂದಿ ನಿವೃತ್ತಿ ಪಡೆಯಲು ಅರ್ಹರು ಎಂದು ಹೇಳುವ ಅಗತ್ಯವೇನು ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.