ಸಿಕ್ಖ್ ವಿರೋಧಿ ದೊಂಬಿ: ಸಜ್ಜನ್ ಕುಮಾರ್ಗೆ ಜೀವಾವಧಿ ಜೈಲು ಶಿಕ್ಷೆ
Team Udayavani, Dec 17, 2018, 11:52 AM IST
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು 1984ರ ಸಿಕ್ಖ್ ವಿರೋಧಿ ದೊಂಬಿ ಪ್ರಕರಣದ ದೋಷಿ ಎಂದು ದಿಲ್ಲಿ ಹೈಕೋರ್ಟ್ ಇಂದು ಸೋಮವಾರ ಘೋಷಿಸಿ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ಸಜ್ಜನ್ ಕುಮಾರ್ ಅವರನ್ನು ಈ ಪ್ರಕರಣದಲ್ಲಿ ಈ ಮೊದಲು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ವಜಾ ಮಾಡಿ ದಿಲ್ಲಿ ಹೈಕೋರ್ಟ್ ಈ ತೀರ್ಪು ನೀಡಿತು. 2018ರ ಡಿಸೆಂಬರ್ 31ರೊಳಗೆ ಪೊಲೀಸರಿಗೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿತು.
ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯನ್ನುಅನುಸರಿಸಿ 1984ರ ನವೆಂಬರ್ 1ರಂದು ದಿಲ್ಲಿಯ ಕಂಟೋನ್ಮೆಂಟ್ ಪ್ರದೇಶದ ರಾಜಾಜಿ ನಗರದಲ್ಲಿ ಕುಟುಂಬವೊಂದರ ಐವರು ಸದಸ್ಯರನ್ನು ಹತ್ಯೆಗೈಯಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ಖುಲಾಸೆ ಗೊಳಿಸಿತ್ತು; ಆದರೆ ಅದೇ ವೇಳೆ ಕಾಂಗ್ರೆಸ್ ಕೌನ್ಸಿಲರ್ ಬಲವಾನ್ ಖೋಖರ್, ನಿವೃತ್ತ ನೌಕಾಪಡೆ ಅಧಿಕಾರಿ ಕ್ಯಾಪ್ಟನ್ ಭಾಗ್ಮಾಲ್, ಗಿರಿಧಾರಿ ಲಾಲ್ ಮತ್ತು ಇನ್ನಿಬ್ಬರನ್ನು ದೋಷಿಗಳೆಂದು ಸಾರಿತ್ತು.
ಖೋಖರ್, ಭಾಗ್ಮಾಲ್ ಮತ್ತು ಗಿರಿಧಾರಿ ಲಾಲ್ ಅವರಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಮಾಜಿ ಶಾಸಕ ಮಹೇಂದರ್ ಯಾದವ್ ಮತ್ತು ಕಿಶನ್ ಖೋಖರ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
2013ರ ಮೇ ತಿಂಗಳಲ್ಲಿ ಪ್ರಕರಣದ ಆರೋಪಿಗಳು ವಿಚಾರಣಾ ನ್ಯಾಯಾಲಯ ತಮ್ಮನ್ನು ದೋಷಿ ಎಂದು ಪ್ರಕಟಿಸಿ ನೀಡಿದ್ದ ಶಿಕ್ಷೆಯ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಸಜ್ಜನ್ ಕುಮಾರ್ ಅವರ ಖುಲಾಸೆಯ ತೀರ್ಪನ್ನು ಪ್ರಶ್ನಿಸಿದ್ದ ಸಿಬಿಐ, ಆರೋಪಿಗಳೆಲ್ಲ ಕೂಡಿಕೊಂಡು ಧಾರ್ಮಿಕ ನಿವಾರಣಾ ಹತ್ಯೆಯನ್ನು ಕೈಗೊಳ್ಳಲು ಕೋಮು ದೊಂಬಿಯ ಸಂಚನ್ನು ರೂಪಿಸುವಲ್ಲಿ ತೊಡಗಿಕೊಂಡಿದ್ದರು ಎಂದು ಆರೋಪಿಸಿತ್ತು.
ಜಸ್ಟಿಸ್ ಎಸ್ ಮರಳೀಧರ ಮತ್ತು ಜಸ್ಟಿಸ್ ವಿನೋದ್ ಗೋಯಲ್ ಅವರನ್ನು ಒಳಗೊಂಡ ಪೀಠವು ಅಕ್ಟೋಬರ್ 29ರಂದು ಸಿಬಿಐ, ದೊಂಬಿ ಸಂತ್ರಸ್ತರು ಮತ್ತು ದೋಷಿಗಳು ಸಲ್ಲಿಸಿದ್ದ ಅಪೀಲುಗಳ ಮೇಲಿನ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಕಾಯ್ದಿರಿಸಿತ್ತು.