ಪೆಹ್ಲೂ ಖಾನ್ ಹತ್ಯೆ ಪ್ರಕರಣ; ಎಲ್ಲಾ ಆರು ಆರೋಪಿಗಳು ಖುಲಾಸೆ; ರಾಜಸ್ಥಾನ ಕೋರ್ಟ್
Team Udayavani, Aug 14, 2019, 6:44 PM IST
ರಾಜಸ್ಥಾನ: 2017ರಲ್ಲಿ ಪೆಹ್ಲೂ ಖಾನ್ ಗುಂಪು ಥಳಿತದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರು ಮಂದಿ ಆರೋಪಿಗಳನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಎಲ್ಲಾ ಆರು ಮಂದಿ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂದು ವಕೀಲ ಹೇಮ್ ಚಂದ್ ಶರ್ಮಾ ತಿಳಿಸಿದ್ದಾರೆ. 2017ರಲ್ಲಿ ರಾಜಸ್ಥಾನದ ಅಲ್ವಾರ್ ನಲ್ಲಿ ಜಾನುವಾರ ತರುತ್ತಿದ್ದ ವೇಳೆ ಗುಂಪು ಥಳಿತದಿಂದ ಪೆಹ್ಲೂ ಖಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಎಂದು ವರದಿ ತಿಳಿಸಿದೆ.
ಪ್ರಕರಣದ ಅಂತಿಮ ವಾದ, ಪ್ರತಿವಾದ ಆಲಿಸಿದ್ದ ಕೋರ್ಟ್ ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಆಗಸ್ಟ್ 7ರಂದು ತೀರ್ಪನ್ನು ಕಾಯ್ದಿರಿಸಿದ್ದು, ಬುಧವಾರ ಪ್ರಕಟಿಸುವುದಾಗಿ ತಿಳಿಸಿದ್ದರು.
ಪ್ರಕರಣದಲ್ಲಿ ವಿಪಿನ್, ರವೀಂದ್ರ, ಕಾಲು ರಾಮ್, ದಯಾನಂದ್ ಮತ್ತು ಯೋಗೇಶ್ ಕುಮಾರ್ ಮೇಲೆ ಪೊಲೀಸರು ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ವೇಳೆ ಪೊಲೀಸರು ಆರೋಪಿ ಗೋಲಿಯ ಮತ್ತು ಭೀಮ್ ರತಿ ವಿರುದ್ಧ ಹೆಚ್ಚುವರಿಯಾಗಿ ಜಾರ್ಜ್ ಶೀಟ್ ಸಲ್ಲಿಸಿದ್ದರು.