ನಾಳೆಯಿಂದ ಜವಾರ್ ಚಂಡಮಾರುತ ಕಾಟ
ಪೂರ್ವದಲ್ಲಿ ಎಲ್ಲೋ, ಆರೆಂಜ್ ಅಲರ್ಟ್
Team Udayavani, Dec 3, 2021, 7:05 AM IST
ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಶುಕ್ರವಾರದಿಂದ ಏಳಲಿರುವ ಜವಾರ್ ಚಂಡಮಾರುತವು, ಇದೇ ಶನಿವಾರ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಹಾಗೂ ಪಶ್ಚಿಮ ಬಂಗಾಲ ರಾಜ್ಯಗಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿರುವ ಹಿನ್ನೆಲೆಯಲ್ಲಿ ಆ ಭಾಗಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ಈ ನಡುವೆ ಆಂಧ್ರಪ್ರದೇಶದ ಶ್ರೀಕಾಕುಳಂ, ವಿಶಾಖ ಪಟ್ಟಣಂ, ವಿಜಯನಗರಂ ಜಿಲ್ಲೆಗಳು, ತೆಲಂಗಾಣ ಹಾಗೂ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಐಎಂಡಿ ತಜ್ಞರು ಹೇಳಿದ್ದಾರೆ. ಇವುಗಳಲ್ಲಿ ಶ್ರೀಕಾಕುಳಂ, ವಿಶಾಖಪಟ್ಟಣಂ, ವಿಜಯ ನಗರಂ ಜಿಲ್ಲೆಗಳಲ್ಲಿ ಡಿ. 3 ಮತ್ತು 4ರ ಅವಧಿಯಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ.ನಷ್ಟು ಮಳೆ ಯಾಗುವ ಸಾಧ್ಯತೆಯಿದ್ದು, ಈ ಪ್ರಾಂತ್ಯಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.
ಇದೇ ಅವಧಿಯಲ್ಲಿ, ಒಡಿಶಾದ ಪುರಿ, ಗಜಪತಿ, ಗಂಜಾಮ್, ಕುರ್ದಾ, ಕೇಂದ್ರಪಾರಾ, ಭದ್ರಕ್, ಬಾಲಾಸೋರ್, ಕಟಕ್ ಹಾಗೂ ನಯಾಗಢ್ ಜಿಲ್ಲೆಗಳಲ್ಲಿ ಡಿ. 3 ಮತ್ತು 4ರಂದು 115.4ರಿಂದ 204.4 ಮಿ.ಮೀ.ನಷ್ಟು ಮಳೆ ಬೀಳಲಿರುವ ಸಾಧ್ಯತೆಯಿದ್ದು, ಈ ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದರ ಸ್ವಲ್ಪ ಬಾಧೆ ಪಶ್ಚಿಮ ಬಂಗಾಲ, ಇತ್ತ ದಕ್ಷಿಣದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಕಾಣಲಿದೆ. ಪಶ್ಚಿಮ ಬಂಗಾಲದಲ್ಲಿ ಗಂಗಾ ನದಿ ತೀರ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ.
95 ರೈಲುಗಳು ರದ್ದು: ಚಂಡಮಾರುತ ಹಿನ್ನೆಲೆ ಯಲ್ಲಿ ಪೂರ್ವ ವಲಯ ರೈಲ್ವೇ ವಿಭಾಗವು ಒಡಿಶಾದಿಂದ ಮತ್ತಿತರ ಭಾಗಗಳಿಗೆ ಸಂಚರಿಸುವ 95 ಪ್ಯಾಸೆಂಜರ್ ರೈಲುಗಳನ್ನು ಡಿ. 3-4ರಂದು ರದ್ದುಗೊಳಿಸಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಂಡಮಾರುತ ಪೀಡಿತ ಪ್ರದೇಶ ಗಳನ್ನು ಮೊದಲೇ ಗುರುತಿಸಿ, ತಗ್ಗು ಪ್ರದೇಶಗ ಳ ಜನರನ್ನು ಸುರಕ್ಷಿತ ಸ್ಥಳಗಳತ್ತ ಕೊಂಡೊ ಯ್ಯುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ ಯನ್ನು (ಎನ್ಡಿಆರ್ಎಫ್) ನಿಯೋಜಿಸಲಾಗಿದೆ.
ಗಂಟೆಗೆ 90ರಿಂದ 100 ಕಿ.ಮೀ. ವೇಗ: ಡಿ. 3ರಂದು ಏಳುವ ಚಂಡಮಾರುತವು, ಡಿ. 4ರಂದು ಆಂಧ್ರ, ತೆಲಂಗಾಣ, ಒಡಿಶಾದ ಪೂರ್ವ ಭಾಗಗಳಿಗೆ ಅಪ್ಪಳಿಸಲಿದೆ. ವೇಗವಾಗಿ ಬೀಸುವ ಬಿರುಗಾಳಿ ಸಹಿತ ಮಳೆಯು ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಸಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು
ಸುರಕ್ಷತ ಕ್ರಮಗಳನ್ನು ಕೈಗೊಳ್ಳಿ: ಮೋದಿ ಸೂಚನೆ
ಚಂಡಮಾರುತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಗುರುವಾರ ಹೊಸದಿಲ್ಲಿ ಯಲ್ಲಿ ನಡೆದಿದ್ದು, ಎಲ್ಲ ರೀತಿಯ ಮುನ್ನೆಚ್ಚರಿ ಕೆಗಳನ್ನು ಕೈಗೊಳ್ಳಬೇಕೆಂದು ಮೋದಿಯವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಲಾವೃತವಾಗುವ ಜಾಗ ಗಳನ್ನು ಮೊದಲೇ ಗುರುತಿಸಿ, ಅಲ್ಲಿನ ಜನ ರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿ ಸಬೇಕು ಹಾಗೂ ಅವರಿಗೆ ಮೂಲ ಸೌಕರ್ಯ, ಆಹಾರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.
ಭರವಸೆ: ಚಂಡಮಾರುತವನ್ನು ಸಮರ್ಥ ವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲ ರೀತಿಯ ಬೆಂಬಲವನ್ನೂ ನೀಡಲಿದೆ ಎಂದು ಮೋದಿ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳಿಗೆ ಇದೇ ವೇಳೆ ಭರವಸೆ ನೀಡಿದ್ದಾರೆ.