ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ : ಗೌಹಾತಿಯಲ್ಲಿ ಪೊಲೀಸ್ ಗುಂಡಿಗೆ ಮೂವರು ಬಲಿ
Team Udayavani, Dec 12, 2019, 9:41 PM IST
ಗೌಹಾತಿ: ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಾಗುವುದನ್ನು ವಿರೋಧಿಸಿ ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಹಿಂಸಾರೂಪವನ್ನು ತಳೆದಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಕಾರಣ ಮೂವರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಮತ್ತು ಹಲವು ಪ್ರತಿಭಟನಗಾರರಿಗೆ ಗಾಯಗಳಾಗಿವೆ.
ಬುಧವಾರ ರಾತ್ರಿಯಿಂದ ಅಸ್ಸಾಂ ರಾಜಧಾನಿ ಗೌಹಾತಿಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಉಲ್ಲಂಘಿಸಿ ಸಾವಿರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭದ್ರತಾ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿ ಉದ್ರಿಕ್ತ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಪ್ರತಿಭಟನಾಕಾರರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆಂದು ವರದಿ ತಿಳಿಸಿದೆ.
ಅಸ್ಸಾಂ ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಇಂಟರ್ನೆಟ್ ಸೇವೆಗಳನ್ನು ರದ್ದುಗೊಳಿಸಿ ಇಲ್ಲಿನ ಸರಕಾರ ಆದೇಶ ಹೊರಡಿಸಿದೆ. ಹಾಗೂ ರಾಜ್ಯದ ಸೂಕ್ಷ್ಮಪ್ರದೇಶಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಭದ್ರತೆಗಾಗಿ ಸೇನಾ ಯೋಧರನ್ನು ನಿಯೋಜಿಸಲಾಗಿದೆ.
ಪ್ರತಿಭಟನಾಕಾರರು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಮತ್ತು ಕೇಂದ್ರ ಸಚಿವ ರಾಮೇಶ್ವರ್ ತೇಲಿ ಸೇರಿದಂತೆ ಹಲವು ರಾಜಕಾರಣಿಗಳ ನಿವಾಸಗಳಿಗೆ ದಾಳಿ ನಡೆಸಿದ್ದಾರೆ. ಮತ್ತು ಪ್ರತಿಭಟನೆ ಇನ್ನಷ್ಟು ಉಗ್ರರೂಪ ತಾಳುವ ಸಾಧ್ಯತೆ ಇರುವುದರಿಂದ ಎಲ್ಲಾ ಕಡೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಪ್ರಾರಂಭದಲ್ಲಿ ಶಾಂತಿಯುತವಾಗಿಯೇ ನಡೆಯುತ್ತಿತ್ತು ಆದರೆ ಉದ್ರಿಕ್ತ ಗುಂಪೊಂದು ಪ್ರತಿಭಟನಾಕಾರರನ್ನು ಸೇರಿಕೊಂಡ ಬಳಿಕ ಈ ಪ್ರತಿಭಟನೆ ಉಗ್ರ ಮತ್ತು ಹಿಂಸಾ ಸ್ವರೂಪ ತಾಳಿತು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಪ್ರಾರಂಭದಲ್ಲಿ ಶಾಂತಿಯುತವಾಗಿಯೇ ನಡೆಯುತ್ತಿತ್ತು ಆದರೆ ಉದ್ರಿಕ್ತ ಗುಂಪೊಂದು ಪ್ರತಿಭಟನಾಕಾರರನ್ನು ಸೇರಿಕೊಂಡ ಬಳಿಕ ಈ ಪ್ರತಿಭಟನೆ ಉಗ್ರ ಮತ್ತು ಹಿಂಸಾ ಸ್ವರೂಪ ತಾಳಿತು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ತಲಾ 70 ಯೋಧರನ್ನು ಒಳಗೊಂಡ ಐದು ತುಕುಡಿಗಳನ್ನು ಅಸ್ಸಾಂನಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ಎರಡು ತುಕುಡಿಗಳನ್ನು ಗೌಹಾತಿಯಲ್ಲಿ ನಿಯೋಜಿಸಲಾಗಿದೆ. ತಿನ್ ಸುಖಿಯಾ, ದಿಭ್ರುಗರ್ ಮತ್ತು ಜೊರ್ಹಾಟ್ ಜಿಲ್ಲೆಗಳಲ್ಲೂ ಸಹ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.