ಅರುಣಾಚಲದಲ್ಲಿ ಭೂಕುಸಿತ: 4 ಐಟಿಬಿಪಿ ಸಿಬಂದಿಗಳ ದಾರುಣ ಸಾವು
Team Udayavani, Jun 29, 2018, 7:31 PM IST
ಇಟಾನಗರ : ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟ ಪ್ರದೇಶದಲ್ಲಿನ ಭಾರೀ ಗಾತ್ರದ ಬಂಡೆಯೊಂದು ಉರುಳಿ ರಸ್ತೆಯಲ್ಲಿ ಸಾಗುತ್ತಿದ್ದ ಇಂಡೋ ಟಿಬೆಟಾನ್ ಬಾರ್ಡರ್ ಪಡೆಯ ವಾಹನಕ್ಕೆ ಅಪ್ಪಳಿಸಿದ ಪರಿಣಾಮವಾಗಿ ವಾಹನದೊಳಗಿದ್ದವರ ಪೈಕಿ ನಾಲ್ವರು ಐಟಿಬಿಪಿ ಸಿಬಂದಿಗಳು ದಾರುಣವಾಗಿ ಮೃತ ಪಟ್ಟ ಘಟನೆ ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ ಬಸಾರ್ – ಅಕಾಜನ್ ರಸ್ತೆಯಲ್ಲಿ ನಡೆದಿರುವುದು ವರದಿಯಾಗಿದೆ.
ಇತರ ಎಂಟು ಮಂದಿ ಸಿಬಂದಿಗಳು ಈ ದುರ್ಘಟನೆಯಲ್ಲಿ ಗಾಯಾಳುಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಈ ದುರ್ಘಟನೆ ಇಂದು ಮಧ್ಯಾಹ್ನ 2.30ರ ಸುಮಾರಿಗೆ ಲಿಕಾಬಾಲಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಐದು ದಿನಗಳಲ್ಲಿ ನಡೆದಿರುವ ಎರಡನೇ ಭೂಕುಸಿತದ ದುರ್ಘಟನೆ ಇದಾಗಿದೆ.ಇದರೊಂದಿಗೆ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಈಗ 9ಕ್ಕೇರಿದಂತಾಗಿದೆ.