ಭಿಲಾಯಿ ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ:6 ಸಾವು,14 ಮಂದಿ ಗಂಭೀರ
Team Udayavani, Oct 9, 2018, 2:50 PM IST
ರಾಯ್ಪುರ(ಛತ್ತೀಸ್ಗಡ ): ಇಲ್ಲಿಂದ 30 ಕಿ.ಮೀ ದೂರದಲ್ಲಿರುವ ಭಿಲಾಯಿ ಉಕ್ಕಿನ ಕಾರ್ಖಾನೆಯಲ್ಲಿ ಮಂಗಳವಾರ ಭೀಕರ ಸ್ಫೋಟ ಸಂಭವಿಸಿ 6 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದು , 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಕ್ ಓವನ್ ವಿಭಾಗದ ಗ್ಯಾಸ್ ಪೈಪ್ಲೈನ್ನಲ್ಲಿ ಸ್ಫೋಟ ಸಂಭವಿಸಿದ್ದು, ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಆದರೂ 6 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕರವಾಗಿದೆ ಎಂದು ತಿಳಿದು ಬಂದಿದೆ.
ದೇಶದ ಅತೀ ದೊಡ್ಡ ಉಕ್ಕು ಉತ್ಪಾದಕ ಘಟಕ ಎಂಬ ಖ್ಯಾತಿಯ ಆಧುನೀಕೃತ ಘಟಕವನ್ನು ಪ್ರಧಾನಿ ಮೋದಿ ಅವರು ಜೂನ್ ತಿಂಗಳಿನಲ್ಲಿ ಉದ್ಘಾಟಿಸಿದ್ದರು.