ಲಷ್ಕರ್, ಹಿಜ್ಬುಲ್ನ ಆರು ಉಗ್ರರ ಹತ್ಯೆ
Team Udayavani, Nov 24, 2018, 6:00 AM IST
ಶ್ರೀನಗರ: ದಕ್ಷಿಣ ಕಾಶ್ಮೀರದ ಬಿಜ್ಬೇಹರ ಪ್ರಾಂತ್ಯದಲ್ಲಿ ಲಷ್ಕರ್ ಎ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳಿಗೆ ಸೇರಿದ ಆರು ಉಗ್ರವಾದಿಗಳನ್ನು ಭದ್ರತಾ ಪಡೆಗಳು ಶುಕ್ರವಾರ ಹತ್ಯೆಗೈದಿವೆ. ಇವರನ್ನು ಆಜಾದ್ ಅಹ್ಮದ್ ಮಲಿಕ್, ಉನ್ನಾಯಿಸ್ ಶಫಿ, ಬಾಸಿತ್ ಇಶಿಯಾಖ್, ಆತಿಫ್ ನಜರ್, ಫಿರ್ದೋಸ್ ಅಹ್ಮದ್ ಹಾಗೂ ಶಾಹೀದ್ ಬಾಶಿರ್ ಎಂದು ಗುರುತಿಸಲಾಗಿದೆ.
ಇವರಲ್ಲೊಬ್ಬ ಪತ್ರಕರ್ತ ಶುಜಾತ್ ಬುಖಾರಿಯ ಹತ್ಯೆಯ ರೂವಾರಿಯೂ ಹೌದು. ಮೂವರು ಉಗ್ರರೂ ಭಯೋತ್ಪಾದನಾ ಸಂಘಟನೆಗಳ ಕಮಾಂಡರ್ಗಳೆಂದು ಪೊಲೀಸರು ತಿಳಿಸಿದ್ದಾರೆ. ವಗಾಹಮಾ ಸುಕ್ತಿಪೊರಾ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಭಯೋತ್ಪಾದಕ ಗುಂಪೊಂದು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಆ ಪ್ರಾಂತ್ಯದಲ್ಲಿ ಗುರುವಾರ ರಾತ್ರಿಯಿಂದಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಶುಕ್ರವಾರ ಉಗ್ರರೊಂದಿಗೆ ಅವರ ಮುಖಾಮುಖಿಯಾಗಿ ಗುಂಡಿನ ಚಕಮಕಿ ನಡೆಯಿತು. ಹತ್ಯೆಗೀಡಾದ ಆರೂ ಉಗ್ರರು, ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು ಎಂದು ಜಮ್ಮು ಕಾಶ್ಮೀರದ ಡಿಜಿಪಿ (ಕಾಶ್ಮೀರ ವಲಯ) ಸ್ವಯಂ ಪ್ರಕಾಶ್ ಪಾಣಿ ತಿಳಿಸಿದ್ದಾರೆ.