ಭೀಕರ ಅಪಘಾತ-ಕಾರಿನಲ್ಲಿದ್ದ ಏಳು ಮಂದಿ ಜೀವಂತ ದಹನ, ಓರ್ವ ಮಹಿಳೆ ಪವಾಡಸದೃಶ ಪಾರು
ಎಸ್ ಯುವಿ ಕಾರು ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು
Team Udayavani, Nov 21, 2020, 5:04 PM IST
ಅಹಮದಾಬಾದ್/ಸುರೇಂದ್ರನಗರ್:ಟ್ರಕ್ ಗೆ(ಟಿಪ್ಪರ್) ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಜೀವಂತವಾಗಿ ದಹನವಾದ ದಾರುಣ ಘಟನೆ ಗುಜರಾತ್ ನ ಸುರೇಂದ್ರನಗರ್ ಜಿಲ್ಲೆಯ ಪಟಾಡಿ ತೆಹಸಿಲ್ ನ ಖೇರ್ವಾ ಗ್ರಾಮದ ಬಳಿ ನಡೆದಿದೆ.
ಅತೀ ವೇಗವಾಗಿ ಆಗಮಿಸಿದ್ದ ಎಸ್ ಯುವಿ ಕಾರು ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು. ಕಾರಿನೊಳಗಿದ್ದ ಎರಡು ಕುಟುಂಬಗಳ ಏಳು ಮಂದಿ ಜೀವಂತವಾಗಿ ದಹನವಾಗಿದ್ದರು.
ಪವಾಡಸದೃಶ ಎಂಬಂತೆ ಕಾರಿನೊಳಗಿದ್ದ ಓರ್ವ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ಬದುಕುಳಿದ ಏಕೈಕ ಮಹಿಳೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಂತರ ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ರಮೇಶ್ (38ವರ್ಷ), ಇವರ ಪತ್ನಿ ಕೈಲಾಶ್ ಬೆನ್ (35), ಮಕ್ಕಳಾದ ಸುನ್ನಿ (12) ಮತ್ತು ಶೀತಲ್(8ವರ್ಷ) ಹಾಗೂ ಇವರ ಸಂಬಂಧಿಗಳಾದ ಹರೇಶ್ (35ವರ್ಷ), ಇವರ ಪತ್ನಿ ಸೇಜಾಲ್ ಬೆನ್ (32), ಪುತ್ರ ಹರ್ಶಿಲ್ (6ವರ್ಷ) ಸಾವನ್ನಪ್ಪಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಪಿಕೆ ಪಟೇಲ್ ತಿಳಿಸಿದ್ದಾರೆ.