ದೇಶ ಈಗ ಸಂಪೂರ್ಣ ಆತ್ಮವಿಶ್ವಾಸ ತಳೆದಿದೆ: ಪ್ರಧಾನಿ
Team Udayavani, Aug 15, 2018, 9:56 AM IST
ಹೊಸದಿಲ್ಲಿ: ದೇಶಾದ್ಯಂತ 72 ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ 5 ನೇ ಬಾರಿ ಧ್ವಜಾರೋಹಣ ನರೆವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
ಭಾಷಣದ ಆರಂಭಕ್ಕೆ ತಮಿಳು ಕವಿ ಸುಬ್ರಹ್ಮಣ್ಯ ಭಾರತೀಯಾರ್ ಅವರ ಕವಿತೆಯ ಸಾಲುಗಳನ್ನು ತಮಿಳಿನಲ್ಲೇ ವಾಚಿಸಿದರು. ಭಾರತ ಭವ್ಯ ರಾಷ್ಟ್ರವಾಗಿ ಉದಯಿಸಿ ಇತರರಿಗೆ ಸ್ಫೂರ್ತಿಯಾಗಲಿದೆ. ಸಂಕೋಲೆಗಳನ್ನು ಕಳಚಿಕೊಂಡು ವಿಶಕ್ಕೆ ತೋರಿಸಿ ಕೊಡಲಿದೆ ಎಂದಿದ್ದಾರೆ. ಆ ದೆಸೆಯಲ್ಲಿ ನಾವು ಮುನ್ನಡೆಯಬೇಕು ಎಂದರು.
ದೇಶವಾಸಿಗಳು ಆತ್ಮ ವಿಶ್ವಾಸವನ್ನು ತಳೆದಿದ್ದು, ಹೊಸ ಕನಸುಗಳು ಮತ್ತು ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದರು.
ನಮ್ಮ ದೇಶದ ತಾಯಂದಿರಿಗೆ ನಮ್ಮ ನಮನಗಳು.ನಮ್ಮ ನೌಕಾಪಡೆಯ 6 ಹೆಣ್ಣು ಮಕ್ಕಳು ಸಪ್ತ ಸಾಗರಗಳನ್ನು ದಾಟಿ ಬಂದಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು.
2022 ರ ವೇಳೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತದ ನೌಕೆಯನ್ನು ಕಳುಹಿಸಿ ಅಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ಗುರಿ ನಮ್ಮದಾಗಿದೆ ಎಂದರು.
ಒನ್ರ್ಯಾಂಕ್ ಒನ್ ಪೆನ್ಷನ್,ಸ್ವಚ್ಛ ಭಾರತದಂತಹ ಯೋಜನೆಗಳನ್ನು ಜಾರಿ ಮಾಡಿ ನಮ್ಮ ಬದ್ಧತೆಯನ್ನು ತೋರಿದ್ದೇವೆ ಎಂದರು.
ಈ ವರ್ಷ ಸಂಪ್ಟೆಂಬರ್ ತಿಂಗಳಿನಲ್ಲಿ ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆಯನ್ನು ಜಾರಿ ಮಾಡುತ್ತೇವೆ. ಇದು ಬಡವರಿಗೆ 5 ಲಕ್ಷ ರೂಪಾಯಿ ವರೆಗೆ ಚಿಕಿತ್ಸೆಗೆ ಹಣಕಾಸು ನೆರವು ನೀಡಲಿದೆ ಎಂದರು.
ಇಂದಿನ ಭಾರತದಲ್ಲಿ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ. ಎಲ್ಲಾ ಕೆಲಸಗಳನ್ನು ಪಾರದರ್ಶಕವಾಗಿ ಮಾಡಲಾಗುತ್ತಿದೆ ಎನ್ನುವುದನ್ನು ನಾವು ಖಚಿತಪಡಿಸಿದ್ದೇವೆ ಎಂದರು.
ತ್ರಿವಳಿ ತಲಾಖ್ನಿಂದಾಗಿ ಮುಸ್ಲಿಂ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಆ ಪದ್ದತಿಗೆ ಅಂತ್ಯ ಹಾಕಲು ಬದ್ಧರಾಗಿದ್ದೆವು. ಹಲವರು ನಮ್ಮನ್ನು ಈ ವಿಚಾರದಲ್ಲಿ ವಿರೋಧಿಸಿದ್ದರು ಎಂದರು.
ಕಾಶ್ಮೀರದಲ್ಲಿ ಬಂದೂಕಿನಿಂದ ಎಲ್ಲದಕ್ಕೂ ಪರಿಹಾರ ಸಾಧ್ಯವಿಲ್ಲ. ಅಟಲ್ ಜಿ ಅವರ ಆಶಯದಂತೆ ಶಾಂತಿ ನೆಲೆಸಲು ಮುಂದಾಗಿದ್ದೇವೆ.ಬಂಡುಕೋರರಿಂತ ತತ್ತರಿಸಿದ್ದ ತ್ರಿಪುರಾ, ಅರುಣಾಚಲದಲ್ಲಿ ಈಗ ಶಾಂತಿ ನೆಲೆಸಿದೆ. ಈಶಾನ್ಯ ರಾಜ್ಯಗಳು ದೆಹಲಿಗೆ ಹತ್ತಿರವಾಗಿವೆ ಎಂದರು.