ರಾಜ್ಯಕ್ಕೆ 8 ಪದ್ಮ ಪ್ರಶಸ್ತಿ ;ಯು ಆರ್ ರಾವ್ಗೆ ಪದ್ಮವಿಭೂಷಣ
Team Udayavani, Jan 26, 2017, 3:45 AM IST
ಹೊಸದಿಲ್ಲಿ: ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂದೆ ನಿಸಿಕೊಂಡಿರುವ ಪದ್ಮವಿಭೂಷಣ ಗೌರವಕ್ಕೆ ರಾಜ್ಯದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಪ್ರೊ| ಯು.ಆರ್. ರಾವ್, ಖ್ಯಾತ ಗಾಯಕ ಕೆ.ಜೆ. ಯೇಸುದಾಸ್, ಸದ್ಗುರು ಜಗ್ಗಿ ವಾಸುದೇವ್, ಶರದ್ ಪವಾರ್, ಮುರಳಿ ಮನೋಹರ ಜೋಷಿ ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ನಿಧನ ಹೊಂದಿದ ಹಿರಿಯ ಪತ್ರಕರ್ತ ಚೋ. ರಾಮಸ್ವಾಮಿ ಸಹಿತ ಏಳು ಮಂದಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಆದರೆ ಈ ಪಟ್ಟಿಯಲ್ಲಿ ಕರ್ನಾಟಕದವರು ಯಾ ರೂ ಇಲ್ಲ. ಒಟ್ಟಾರೆ ಈ ಬಾರಿ ಎಂಟು ಮಂದಿ ಕರ್ನಾಟಕದವರಿಗೆ ಪದ್ಮ ಪ್ರಶಸ್ತಿ ಲಭಿ ಸಿದೆ. ವಿಶೇಷವೆಂದರೆ, ಚುನಾವಣಾ ರಾಜ್ಯ ಉತ್ತರ ಪ್ರದೇಶದ ಐದು ಮಂದಿಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದ ಬಾಹ್ಯಾಕಾಶ ವಿಜ್ಞಾನಿ ಪ್ರೊ| ಯು.ಆರ್. ರಾವ್ ಅವರಿಗೆ ಪದ್ಮ ವಿಭೂಷಣ, ಭಾಷಾ ತಜ್ಞ ಪ್ರೊ| ಜಿ. ವೆಂಕಟ ಸುಬ್ಬಯ್ಯ, ಹಿರಿಯ ಚಲನಚಿತ್ರ ನಟಿ ಭಾರತಿ ವಿಷ್ಣುವರ್ಧನ್, ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ, ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್, ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ, ಡಿಸ್ಕಸ್ ಪಟು ವಿಕಾಸ್ ಗೌಡ ಮತ್ತು ದಿಲ್ಲಿಯಲ್ಲಿರುವ “ಸಂಸ್ಕೃತಿ ಭಾರತಿ’ಯ ಸ್ಥಾಪಕ ಚಾ. ಮು. ಕೃಷ್ಣ ಶಾಸ್ತ್ರಿ ಅವರಿಗೆ ಪದ್ಮಶ್ರೀ ಗೌರವ ಲಭಿಸಿದೆ. ಚಾ.ಮು. ಕೃಷ್ಣ ಶಾಸ್ತ್ರಿ ಸಂಸ್ಕೃತವನ್ನು ದೇಶ-ವಿದೇಶ ಗಳಿಗೆ ಹರಡಿಸಿದ ಹಿರಿಮೆಗೆ ಪಾತ್ರ ರಾಗಿದ್ದಾರೆ. ಇದೇ ವೇಳೆ ಈ ಬಾರಿ ಒಟ್ಟು 89 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ 75 ಮಂದಿಗೆ ಪದ್ಮಶ್ರೀ, ಏಳು ಮಂದಿಗೆ ಪದ್ಮವಿಭೂಷಣ ಮತ್ತು ಏಳು ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ 19 ಮಹಿಳೆಯರು, ಐವರು ವಿದೇಶೀಯರು ಮತ್ತು 6 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದೆ.