ವಿವಾದ ಇತ್ಯರ್ಥಕ್ಕೆ ಒಮ್ಮತದ ಪ್ರಯತ್ನ ಮಾಡಿದ್ದು ಹೌದು
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಮಂಡಳಿ ವಕೀಲ ಶಾಹಿದ್ ರಿಜ್ವಿ ಹೇಳಿಕೆ
Team Udayavani, Oct 18, 2019, 5:50 AM IST
ಅಯೋಧ್ಯೆಯ ಕರಸೇವಕಪುರಂನಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ತಂದು ಜೋಡಿಸಿಡಲಾದ ಸ್ತಂಭಗಳನ್ನು ಸಾಧುಗಳು ವೀಕ್ಷಿಸಿದರು.
ಹೊಸದಿಲ್ಲಿ/ಮುಂಬಯಿ: ಅಯೋಧ್ಯೆಯಲ್ಲಿ ರುವ 2.77 ಎಕರೆ ಮಾಲಕತ್ವದ ಬಗೆಗಿನ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ಮುಕ್ತಾಯ ವಾಗುತ್ತಲೇ, ವಿವಾದವನ್ನು ಒಮ್ಮತ ದಿಂದ ಬಗೆಹರಿಸುವ ಬಗ್ಗೆ ಸುನ್ನಿ ವಕ್ಫ್ ಮಂಡಳಿ ಪ್ರಸ್ತಾವ ಮಾಡಿತ್ತು. ಈ ಅಂಶವನ್ನು ಮಂಡಳಿಯ ವಕೀಲ ಶಾಹಿದ್ ರಿಜ್ವಿ ಕೂಡ ಗುರುವಾರ ಖಚಿತ ಪಡಿಸಿದ್ದಾರೆ.
“ಒಳ್ಳೆಯ ಕೆಲಸ ಮಾಡಲು ಸಮಯ ಮುಖ್ಯವಲ್ಲ’ ಎಂಬ ಮಾತನ್ನು ಹೇಳಿರುವ ಅವರು, ನ್ಯಾಯಾ ಲಯದ ಹೊರತಾಗಿ ಮಧ್ಯಸ್ಥಿಕೆ ಸಮಿತಿ ಮುಂದೆ ಎರಡೂ ಪಕ್ಷ ಗಳು ತಮ್ಮ ತಮ್ಮ ಅಭಿಪ್ರಾಯ ಹೇಳಿ ಕೊಳ್ಳಬಹುದು. ಒಳ್ಳೆಯ ಅಂಶಗಳು ಯಾವತ್ತೂ ವಿಳಂಬವಾಗುವುದಿಲ್ಲ. ಒಳ್ಳೆಯ ದಾಗಬೇಕು ಎಂದು ಬಯಸುವುದಿದ್ದರೆ ಕೊನೆಯ ಹಂತ ದಲ್ಲೂ ಅದನ್ನು ಕೈಗೊಳ್ಳಲು ಅವಕಾಶ ಉಂಟು’ ಎಂದು ಹೇಳಿದ್ದಾರೆ.
ನಿರ್ವಾಣಿ ಅಖಾಡಾ, ನಿರ್ಮೋಹಿ ಅಖಾಡಾ, ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳೂ ಶತಮಾನಗಳಷ್ಟು ಹಳೆಯದಾಗಿರುವ ವಿವಾದ ಪರಿಹಾರಕ್ಕೆ ಒಲವು ವ್ಯಕ್ತಪಡಿಸಿವೆ. ಸುಪ್ರೀಂನಲ್ಲಿ 2010ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಖಟ್ಲೆ ಹೂಡಿರುವ ವಿಶ್ವ ಹಿಂದೂ ಪರಿಷತ್ ಪ್ರವರ್ತಿತ ರಾಮ ಜನ್ಮಭೂಮಿ ನ್ಯಾಸ್ ಮತ್ತು ರಾಮ ಮಲ್ಲಾ ಮತ್ತು ಇತರ 6 ಮುಸ್ಲಿಂ ಸಂಘಟ ನೆಗಳು ಈ ವಿಚಾರದಲ್ಲಿ ಭಾಗಿಗಳಾಗಿಲ್ಲ ಎನ್ನುವುದು ಗಮನಾರ್ಹ.
ಅದು ಸರಿಯಾಗಿದೆ: 2.77 ಎಕರೆ ಜಮೀನು ವ್ಯಾಪ್ತಿಯಲ್ಲಿ ಶ್ರೀರಾಮನ ಜನ್ಮಸ್ಥಾನ ಎಲ್ಲಿದೆ ಎಂದು ಚಿತ್ರಿಸಿರುವುದು ಸರಿಯಾಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ಹೇಳಿದ್ದಾರೆ. ಬುಧವಾ ರದ ವಿಚಾರಣೆ ವೇಳೆ ಅವರು ರಚಿಸಿದ್ದ ಮ್ಯಾಪ್ನ ಪ್ರತಿಯನ್ನು ನ್ಯಾಯವಾದಿ ರಾಜೀವ್ ಧವನ್ ಹರಿದು ಹಾಕಿದ ಬಗ್ಗೆ ಮಾತನಾಡಿದ ಅವರು “ಶ್ರೀರಾಮ ಜನಿಸಿದ್ದ ಸ್ಥಳದ ಬಗ್ಗೆ ನಾನು ರಚಿಸಿದ ಭೂಪಟ ಸರಿಯಾಗಿಯೇ ಇದೆ. ಕೋರ್ಟ್ಗೆ ಮ್ಯಾಪ್ ಹಸ್ತಾಂತರಿಸಿದರೆ ಪ್ರಕರಣದಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂಬ ಸತ್ಯ ನ್ಯಾಯವಾದಿ ರಾಜೀವ್ ಧವನ್ಗೆ ಗೊತ್ತಿಲ್ಲದ ಅಂಶ ಏನಲ್ಲ’ ಎಂದು ಹೇಳಿದ್ದಾರೆ.
1989-1990ರ ಅವಧಲ್ಲಿ ಗೃಹ ಇಲಾಖೆ ಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಕುನಾಲ್, ವಿ.ಪಿ.ಸಿಂಗ್, ಚಂದ್ರಶೇಖರ್ ನೇತೃ ತ್ವದ ಸರಕಾರ ಅಧಿಕಾರದಲ್ಲಿದ್ದಾಗ ಹಿಂದೂ, ಮುಸ್ಲಿಂ ಸಂಘಟನೆಗಳ ನಡುವೆ ವಿವಾದ ಇತ್ಯ ರ್ಥಕ್ಕೆ ಶ್ರಮಿಸಿದ್ದರು. 2016ರಲ್ಲಿ “ಅಯೋಧ್ಯಾ ರಿವಿಸಿಟೆಡ್’ ಎಂಬ ಪುಸ್ತಕ ರಚಿಸಿದ್ದರು. ಅದರಲ್ಲಿ ಆ ಮ್ಯಾಪ್ ಒಳ ಗೊಂಡಿತ್ತು. 1760 ರಲ್ಲಿ ಅವಧ್ ಪ್ರದೇಶಕ್ಕೆ ಭೇಟಿ ನೀಡಿದ್ದ ಆಸ್ಟ್ರಿಯಾದ ಜೆಸ್ವಿಟ್ ಧರ್ಮ ಗುರು ಜೋಸೆಫ್ ಟಿಫೆನ್ತಲೇರ್ನ ದಾಖಲಿಸಿದ್ದ ಅಂಶಗಳು ಸಹಿತ 5 ಅಂಶಗಳನ್ನು ಆಧರಿಸಿ ಮ್ಯಾಪ್ ಸಿದ್ಧ ಪಡಿಸಿದ್ದಾಗಿ ಕುನಾಲ್ ಹೇಳಿದ್ದಾರೆ.
ರಾಜೀವ್ ಧವನ್ ವಿರುದ್ಧ ಕ್ರಮ ಕೈಗೊಳ್ಳಿ: ಜಮೀನು ಮಾಲಕತ್ವದ ವಿಚಾರಣೆ ವೇಳೆ 2.77 ಎಕರೆ ಸ್ಥಳದಲ್ಲಿ ಶ್ರೀರಾಮನ ಜನ್ಮಸ್ಥಳ ನಿಗದಿಯಾಗಿ ತೋರಿಸಿದ್ದ ಮ್ಯಾಪ್ನ ಪ್ರತಿ ಹರಿದು ಹಾಕಿದ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಈ ಬಗ್ಗೆ ವಕೀಲರ ಪರಮೋಚ್ಚ ಸಂಸ್ಥೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮುಂದಾಗಬೇಕು ಎಂದು ಪ್ರತಿಪಾದಿಸಿವೆ. ಅಖೀಲ ಭಾರತ ಹಿಂದೂ ಮಹಾಸಭಾ (ಎಐಎಚ್ಎಂ) ಈ ಒತ್ತಾಯ ಮಾಡಿದ್ದು, ಧವನ್ ನಕಾರಾತ್ಮಕ ಕೃತ್ಯವೆಸಗಿ ದ್ದಾರೆ. ಅದರಿಂದಾಗಿ ಸುಪ್ರೀಂಕೋರ್ಟ್ನ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿದಂತಾಗಿದೆ ಎಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಕಾಶಿ, ಮಥುರಾ ಮುಂದಿನ ಅಜೆಂಡಾ
ಅಯೋಧ್ಯೆಯ ಬಳಿಕ ಕಾಶಿ ಮತ್ತು ಮಥುರಾಗಳನ್ನು ಮುಕ್ತಿಗೊಳಿಸುವುದೇ ಮುಂದಿನ ಹೋರಾಟವಾಗಲಿದೆ ಎಂದು ಅಖೀಲ ಭಾರತ ಅಖಾಡಾ ಪರಿಷತ್ (ಎಐಎಪಿ) ಘೋಷಣೆ ಮಾಡಿದೆ. ರಾಮಮಂದಿರ ನಿರ್ಮಾಣ ಪೂರ್ಣವಾದ ಬಳಿಕ ಕಾಶಿ, ಮಥುರಾದಲ್ಲಿನ ದೇಗುಲ ಸಮೀಪವೇ ಇರುವ ಮಸೀದಿಗಳ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಎಐಎಪಿ ಪ್ರಕಟಿಸಿದೆ. ಅಯೋಧ್ಯೆಯಲ್ಲಿ ಇದ್ದ ದೇಗುಲ ಕೆಡವಿ ಹಾಕಿ ಮಸೀದಿ ನಿರ್ಮಿಸಲಾಗಿತ್ತು. ಅದೇ ರೀತಿ ಕಾಶಿ, ಮಥುರಾಗಳಲ್ಲಿಯೂ ದೇಗುಲ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಪರಿಷತ್ ಹೇಳಿದೆ.