ಫೋನಿ ಚಂಡಮಾರುತ ಅಪ್ಪಳಿಸಿ ತಿಂಗಳಾದರೂ ಐದು ಲಕ್ಷ ಜನರು ಇನ್ನೂ ಕತ್ತಲಲ್ಲಿ
Team Udayavani, Jun 4, 2019, 12:31 PM IST
ಭುವನೇಶ್ವರ : ಒಡಿಶಾ ಕರಾವಳಿಗೆ ವಿನಾಶಕಾರಿ ಫೋನಿ ಚಂಡಮಾರುತ ಅಪ್ಪಳಿಸಿ ವ್ಯಾಪಕ ಜೀವ ಹಾನಿ, ನಾಶ, ನಷ್ಟ ಉಂಟಾಗಿ ಒಂದು ತಿಂಗಳು ಕಳೆದರೂ ರಾಜ್ಯದ ಕರಾವಳಿ ಜಿಲ್ಲೆಗಳ 1.64 ಲಕ್ಷ ಕುಟುಂಬಗಳ ಐದು ಲಕ್ಷಕ್ಕೂ ಅಧಿಕ ಜನರಿಗೆ ಈಗಿನ್ನೂ ವಿದ್ಯುತ್ ಪೂರೈಕೆ ಇಲ್ಲದೆ ಅವರು ಕತ್ತಲಲ್ಲೇ ಬದುಕು ಸವೆಸುತ್ತಿದ್ದಾರೆ.
ದೇವಳ ನಗರವಾಗಿ ಪ್ರಸಿದ್ಧಿ ಹೊಂದಿರುವ ಪುರಿ ಚಂಡಮಾರುತದ ಹೊಡೆತದಿಂದ ತೀವ್ರವಾಗಿ ಬಾಧಿತವಾಗಿದ್ದು ಇಲ್ಲಿನ ಶೇ.52 ಬಳಕೆದಾರರಿಗೆ (2,91,171 ಮಂದಿ) ಮಾತ್ರವೇ ಈ ತನಕ ವಿದ್ಯುತ್ ಪೂರೈಕೆ ಪುನರ್ ಸ್ಥಾಪನೆಯಾಗಿದೆ.
ಕಳೆದ ಮೇ 3ರಂದು ಪುರಿಗೆ ಅಪ್ಪಳಿಸಿದ್ದ ಫೋನಿ ಚಂಡಮಾರುತಕ್ಕೆ ಪುರಿ ಜಿಲ್ಲೆಯ 39 ಮಂದಿ ಸೇರಿದಂತೆ ಕನಿಷ್ಠ 64 ಮಂದಿ ಸಾವಪ್ಪಿದ್ದರು. ಫೋನಿ ಚಂಡಮಾರುತದಿಂದಾಗಿ ರಾಜ್ಯದ 14 ಜಿಲ್ಲೆಗಳ 1.65 ಕೋಟಿ ಜನರು ತೀವ್ರವಾಗಿ ಬಾಧಿತರಾಗಿದ್ದರು.