ಕಾರು ಢಿಕ್ಕಿ, ಮಹಿಳೆ ಸಾವು: ಅಜಿಂಕ್ಯ ರಹಾನೆ ತಂದೆ ಅರೆಸ್ಟ್
Team Udayavani, Dec 15, 2017, 3:18 PM IST
ಹೊಸದಿಲ್ಲಿ : ಮಹಿಳೆಯ ಮೇಲೆ ಕಾರು ಹರಿಸಿ ಆಕೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಭಾರತೀಯ ಟೆಸ್ಟ್ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬುರಾವ್ ರಹಾನೆ ಅವರನ್ನು ಕೊಲ್ಹಾಪುರ ಪೊಲೀಸರು ಬಂಧಿಸಿದ್ದಾರೆ.
ರಹಾನೆ ಅವರ ತಂದೆ ತಮ್ಮ ಕುಟುಂಬದವರೊಂದಿಗೆ ಹ್ಯೂಂಡೈ ಐ20 ಕಾರನ್ನು 4ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸುತ್ತಿದ್ದಾಗ ಅವರಿಗೆ ಕಾರಿನ ಮೇಲೆ ನಿಯಂತ್ರಣ ತಪ್ಪಿ ಕಂಗಲ್ ಎಂಬ ಪ್ರದೇಶದಲ್ಲಿ ಅವರ ಕಾರು ಆಶಾತಾಯಿ ಕಾಂಬ್ಳೆ ಎಂಬ ಮಹಿಳೆಗೆ ಢಿಕ್ಕಿ ಹೊಡೆಯಿತು. ತೀವ್ರಗಾಯಗೊಂಡ ಅಶಾತಾಯಿ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ಸಂಭವಿಸಿದೊಡನೆಯೇ ಸ್ಥಳದಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಗಾಯಾಳು ಆಶಾತಾಯಿಯನ್ನು ಆಸ್ಪತ್ರೆಗೆ ಸೇರಿಸಿದರು; ಅದೇ ರೀತಿ ಅಪಘಾತ ಎಸಗಿದ ರಹಾನೆ ಅವರ ತಂದೆಯನ್ನು ಪೊಲೀಸರಿಗೆ ಒಪ್ಪಿಸಿದರು.
ಕೊಲ್ಹಾಪುರ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ಗಳ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಹಾನೆ ತಂದೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.