ಅಳಿಯನ ಶಿರಚ್ಚೇದ ಮಾಡಿ ರುಂಡವನ್ನು ಪೊಲೀಸ್ ಠಾಣೆಗೆ ತಂದ ಆಂಧ್ರದ ವ್ಯಕ್ತಿ!
Team Udayavani, Aug 10, 2020, 2:05 PM IST
ವಿಶಾಖಪಟ್ಟಣ: ವ್ಯಕ್ತಿಯೊಬ್ಬ ತನ್ನ ಅಳಿಯನ ಶಿರಚ್ಚೇದ ಮಾಡಿ, ಆತನ ರುಂಡವನ್ನು ತಾನೇ ಸ್ವತಃ ಪೊಲೀಸ್ ಠಾಣೆಯನ್ನು ಕೊಂಡೊಯ್ದು ಶರಣಾದ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಧಾರಾ ಜಗನ್ನಾಧಪುರಂ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಲ್ಲ ಸತ್ಯನಾರಾಯಣ ಎಂಬಾತನೇ ಅಳಿಯನನ್ನು ಕೊಲೆಗೈದ ಆರೋಪಿ. ಲಚ್ಚಣ್ಣ ಕೊಲೆಯಾದ ವ್ಯಕ್ತಿ.
ತನ್ನ ಮಗಳನ್ನು ಮದುವೆಯಾಗಿದ್ದ ಲಚ್ಚಣ್ಣ ಮರುಮದುವೆಯಾಗುವ ಉದ್ದೇಶದಿಂದ ಆಕೆಯನ್ನು 10 ತಿಂಗಳ ಹಿಂದೆ ಕೊಲೆಗೈದಿದ್ದ. ಈ ಕೋಪದಿಂದ ಸತ್ಯನಾರಾಯಣ ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ.
ಕಳೆದ ಶನಿವಾರ ಮಗಳ ಹತ್ತನೇ ತಿಂಗಳ ಪುಣ್ಯತಿಥಿಯ ಕಾರಣ ಅಳಿಯನನ್ನು ಸತ್ಯನಾರಾಯಣ ಮನೆಗೆ ಆಹ್ವಾನಿಸಿದ್ದ. ಈ ವೇಳೆ ಮನೆಯಲ್ಲಿ ಗಲಾಟೆಯಾಗಿ ಸತ್ಯನಾರಾಯಣ ಹರಿತವಾದ ಅಯುಧದಿಂದ ಅಳಿಯನನ್ನು ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ.
ಮರು ಮದುವೆಯಾಗುವ ಉದ್ದೇಶದಿಂದ ಲಚ್ಚಣ್ಣ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಲು ಪಿತೂರಿ ನಡೆಸಿದ್ದ ಎಂದು ಸತ್ಯನಾರಾಯಣ ಆರೋಪಿಸಿದ್ದಾನೆ.