ಉಕ್ರೇನ್ ಯುದ್ಧದಿಂದ ಹೊಸ ಪಾಠ: ಲೆ.ಜ.ಕಲಿತಾ
Team Udayavani, May 24, 2022, 9:55 PM IST
ಕೋಲ್ಕತಾ:ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ನಾವು ಹೊಸ ಪಾಠವನ್ನು ಕಲಿತಂತಾಗಿದೆ ಎಂದು ಭಾರತೀಯ ಸೇನೆಯ ಪೂರ್ವ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆ.ಜ. ಆರ್.ಪಿ.ಕಲಿತಾ ಹೇಳಿದ್ದಾರೆ.
ಕೋಲ್ಕತಾದಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಠಿಣ ಹಾಗೂ ಶಕ್ತಿಯುತವಾದ ಸೇನೆ ಇದ್ದರೆ ಮಾತ್ರ ಜಗತ್ತಿನಲ್ಲಿ ಒಂದು ರಾಷ್ಟ್ರಕ್ಕೆ ಬೆಲೆ ಎಂಬ ಹೊಸ ಪಾಠ ಸಿಕ್ಕಿದೆ. ಮುಕ್ತ ಸಂಘರ್ಷದ ಯುಗ ಮುಗಿಯಿತು ಎಂಬ ನಂಬಿಕೆಯೂ ಸುಳ್ಳಾಗಿದೆ ಎಂದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಗಲಾಟೆಯಿಂದ ಯುದ್ಧಗಳೆಲ್ಲ ಅಲ್ಪ ಕಾಲಿಕವಾದದ್ದು ಎಂಬ ನಂಬಿಕೆಯೂ ಸುಳ್ಳಾಗಿದೆ. ಏಕೆಂದರೆ ಎರಡು ದೇಶಗಳ ನಡುವಿನ ಕಾಳಗ ಮೂರು ತಿಂಗಳು ದಾಟಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಯುದ್ಧ ಸಂಭವಿಸಿದರೆ ನಿಗದಿತ ದೇಶವೊಂದೇ ಹೋರಾಟ ನಡೆಸಬೇಕಾಗುತ್ತದೆ ಎಂಬ ಸತ್ಯವೂ ಅರಿವಿಗೆ ಬಂದಿದೆ ಎಂದಿದ್ದಾರೆ ಲೆ.ಜ.ಕಲಿತಾ.