ಮತ್ತೆ ಕೇಜ್ರಿವಾಲ್ ಗೆ ದೆಹಲಿ ಗದ್ದುಗೆ ?
Team Udayavani, Jan 29, 2020, 5:10 AM IST
ರಾಷ್ಟ್ರ ರಾಜಧಾನಿ ದೆಹಲಿ ಫೆಬ್ರವರಿ 8ರಂದು ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. 70 ಸ್ಥಾನಗಳ ಚಿಕ್ಕ ವಿಧಾನಸಭೆಯಾಗಿದ್ದರೂ, ಇಡೀ ದೇಶದ ಗಮನ ಈ ಚುನಾವಣೆಯತ್ತ ಇರಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 70ರಲ್ಲಿ 67 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದ ಆಮ್ ಆದ್ಮಿ ಪಾರ್ಟಿ, ಈ ಬಾರಿಯೂ ತನ್ನ ಜೈತ್ರಯಾತ್ರೆ ಮುಂದುವರಿಸುವ ಭರವಸೆಯಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಅದಕ್ಕೇ ಗೆಲುವು ಎಂದು ಹೇಳುತ್ತಿವೆ. ಹಾಗಿದ್ದರೆ, ಬಿಜೆಪಿಗೆ ಈ ಸಮೀಕ್ಷೆಗಳನ್ನೆಲ್ಲ ಉಲ್ಟಾ ಮಾಡಿ ಅಧಿಕಾರಕ್ಕೇರಲಿದೆಯೇ ಅಥವಾ ಮತ್ತೆ ಮುಖಭಂಗ ಅನುಭವಿಸುವುದೇ? ಕಾಂಗ್ರೆಸ್ ಕಳೆದು ಹೋದ ತನ್ನ ವರ್ಚಸ್ಸನ್ನು ಪುನಃ ಸ್ಥಾಪಿಸಲು ಸಫಲವಾಗುತ್ತದಾ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಗಮನಾರ್ಹ ಸಂಗತಿಯೆಂದರೆ, ಈ ಬಾರಿ “ಸಬ್ಸಿಡಿ’ ವಿಚಾರವೇ ಚುನಾವಣೆಯ ಪ್ರಮುಖ ಚರ್ಚೆಯಾಗಿರುವುದು…
2017ರಲ್ಲಿ ಬಿಜೆಪಿಯು ದೆಹಲಿಯ ಪುರಸಭೆ ಚುನಾವಣೆಯಲ್ಲಿ ಮೂರೂ ಪುರಸಭೆಗಳನ್ನೂ ಹಿಡಿತಕ್ಕೆ ತೆಗೆದುಕೊಂಡಿತು. 2019ರ ಲೋಕಸಭಾ ಚುನಾವಣೆಯಲ್ಲಿ ಕಮಲದಳ ದೆಹಲಿಯಲ್ಲಿನ ಏಳಕ್ಕೆ ಏಳೂ ಲೋಕಸಭಾ ಸೀಟುಗಳನ್ನು ಗೆದ್ದಿತು, ಅದೂ 56 ಪ್ರತಿಶತ ಮತ ಪಾಲು ಪಡೆದು! ಈ ಅಂಕಿಸಂಖ್ಯೆಗಳನ್ನು ನೋಡಿದಾಗ, ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೇ ಮೇಲುಗೈ ಸಿಗಬಹುದು ಎಂದು ಅನಿಸುವುದು ಸಹಜ. ಇತ್ತ ಬಿಜೆಪಿ ಕೂಡ ಕೇಜ್ರಿವಾಲ್ರ ವಿರುದ್ಧ ಅಧಿಕಾರ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಹೇಳುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕಳೆದ ಐದು ವರ್ಷಗಳಲ್ಲಿ ದೆಹಲಿ ಸರ್ಕಾರ ಮತ್ತು ಕೇಂದ್ರದ ನಡುವೆ ಧಕ್ಕಾಮುಕ್ಕಿ ಹೆಚ್ಚಾಗಿದ್ದರಿಂದ, ತಾನು ಅಧಿಕಾರಕ್ಕೆ ಬಂದರೆ, ಕೇಂದ್ರ ಮತ್ತು ರಾಜ್ಯದ ನಡುವೆ ಸಮನ್ವಯ ಉತ್ತಮವಾಗಿರುತ್ತದೆ ಎನ್ನುವುದು ಬಿಜೆಪಿಯ ವಾದ. ಆದರೆ, ಚುನಾವಣಾ ಪೂರ್ವ ಸಮೀಕ್ಷೆಗಳು, ರಾಜಕೀಯ ಪರಿಣತರು ಈ ಬಾರಿಯೂ ಅರವಿಂದ್ ಕೇಜ್ರಿವಾಲ್ರ ಪಕ್ಷಕ್ಕೇ ಮೇಲುಗೈ ಪಕ್ಕಾ ಎನ್ನುತ್ತಿದ್ದಾರೆ. ಜನವರಿ 21ರಂದು ಬಿಡುಗಡೆಯಾಗಿರುವ ಸಿ ಓಟರ್ ಸಮೀಕ್ಷೆಯು, “”53 ಪ್ರತಿಶತ ದೆಹಲಿಗರು ಮುಂಬರುವ ಚುನಾವಣೆಯಲ್ಲಿ ಆಪ್ ಪರ ಇದ್ದಾರೆ’ ಎನ್ನುತ್ತದೆ. ಇದಕ್ಕೆ ಹೋಲಿಸಿದರೆ 29 ಪ್ರತಿಶತ ಜನ ಬಿಜೆಪಿ ಪರವಾಗಿ, ಹಾಗೂ ಕಾಂಗ್ರೆಸ್ನ ಪರವಾಗಿ ಕೇವಲ 4 ಪ್ರತಿಶತ ಮತದಾರರು ಇದ್ದಾರೆ ಎನ್ನುತ್ತಿದೆ.
ದೆಹಲಿಯನ್ನು ಸುಮಾರು 15 ವರ್ಷಗಳವರೆಗೆ ಆಳಿದ್ದ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಹಂಚಿಕೆ ಪ್ರಮಾಣದಲ್ಲಿ ಆಪ್ಗಿಂತ ಮೇಲುಗೈ ಸಾಧಿಸಿತ್ತು ಎನ್ನುವುದು ಸತ್ಯವಾದರೂ, ಅದನ್ನು ಈಗಲೂ ಜನ ರಾಷ್ಟ್ರೀಯ ಪರ್ಯಾಯವೆಂದು ನೋಡುತ್ತಾರೆಯೇ ಹೊರತು, ಆಪ್ಗೆ ಪರ್ಯಾಯ ಎಂದಲ್ಲ. ಹೀಗಾಗಿ, ಈ ಬಾರಿಯೂ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿ ಇದೆ.
ಈ ಬಾರಿ ಅಖಾಡದಲ್ಲಿ ಬಹುಜನ ಸಮಾಜವಾದಿ ಪಕ್ಷವೂ ಇದ್ದು, ಅದು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆದ್ದಿರಲಿಲ್ಲ. ಆದರೂ, ಬಿಎಸ್ಪಿ ಮತ್ತು ಆಪ್ನ “ಟಾರ್ಗೆಟ್ ಮತದಾರ’ ವರ್ಗ ಒಂದೇ ಆಗಿರುವುದರಿಂದ, ಆಪ್ನ ಕೊಂಚ ಸೀಟುಗಳನ್ನು ಬಿಎಸ್ಪಿ ಕೊಳ್ಳೆಹೊಡೆಯಬಹುದು.
ಬಗೆಹರಿಯದ ನಾಯಕತ್ವದ ವಿಚಾರ
ದೆಹಲಿ ಗದ್ದುಗೆಗೇರಬೇಕು ಎಂದು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಈಗಲೂ ರಾಜ್ಯದಲ್ಲಿ ನಾಯಕತ್ವ ಚಹರೆಯನ್ನು ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ. 2015ರಲ್ಲಿ ಬಿಜೆಪಿ ಕಿರಣ್ ಬೇಡಿಯವರನ್ನು ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿ, ಫಲಿತಾಂಶ ತನ್ನ ಪರ ಬರಬಹುದು ಎಂದು ನಿರೀಕ್ಷಿಸಿತ್ತು. ಆದರೆ ಕಿರಣ್ ಬೇಡಿ ನೇತೃತ್ವದಲ್ಲಿ ಕಮಲ ಪಾಳೆಯ ಅಕ್ಷರಶಃ ನೆಲಕಚ್ಚಿತು. 70ರಲ್ಲಿ ಅದಕ್ಕೆ ಸಿಕ್ಕಿದ್ದು ಕೇವಲ 3 ಸ್ಥಾನಗಳಷ್ಟೇ. ಆ ನಂತರದಿಂದ ಬಿಜೆಪಿಯು ಭೋಜ್ಪುರಿ ಗಾಯಕ ಮನೋಜ್ ತಿವಾರಿಯವರನ್ನು ದೆಹಲಿ ಬಿಜೆಪಿಯ ಪ್ರಮುಖ ಮುಖವೆಂದು ಬಿಂಬಿಸುತ್ತಾ ಬಂದಿದೆ. ಇದಕ್ಕಾಗಿ, ದೆಹಲಿ ಘಟಕದ ಅಧ್ಯಕ್ಷರನ್ನಾಗಿಯೂ ತಿವಾರಿಯವರನ್ನು ಅದು ನೇಮಿಸಿತು. ಆದರೆ, ಈ ತಿಂಗಳ ಆರಂಭದಲ್ಲಿ ಅಮಿತ್ ಶಾ ಅವರು, “ಪಕ್ಷವು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹೋರಾಡಲಿದೆ’ ಎಂದಿದ್ದಾರೆ(ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ). ಹೀಗಾಗಿ, ನಾಯಕತ್ವ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಬಗೆಹರಿಯದ ಗೊಂದಲ ಅಥವಾ ಅಸಮಾಧಾನಗಳು ಇವೆ ಎಂದು ಪರಿಣತರು ವಿಶ್ಲೇಷಿಸುತ್ತಿದ್ದಾರೆ.
ಸಿಎಎ ಪ್ರಭಾವ ಬೀರುವುದೇ?
ಮೇಲ್ನೋಟಕ್ಕೆ ಸದ್ಯಕ್ಕೆ ಸಿಎಎ ವಿಚಾರವೇ ಆಪ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾದ-ಪ್ರತಿವಾದದ ವಿಷಯವಾಗಿದೆಯಾದರೂ, ನಿಜಕ್ಕೂ ಈ ಮೂರೂ ಪಕ್ಷಗಳು ಜನರ ಬಳಿ ಒಯ್ಯುತ್ತಿರುವುದು ಬೇರೆಯ ವಿಚಾರಗಳನ್ನೇ. ಅದರಲ್ಲೂ ನಾಲ್ಕು ವಿಷಯಗಳ ಸುತ್ತಲೇ ಈ ಪಕ್ಷಗಳು ಸುತ್ತುತ್ತಿವೆ. 1) ವಿದ್ಯುತ್ 2) ನೀರು 3) ಶಿಕ್ಷಣ 4) ಆರೋಗ್ಯ. ಮೊದಲ ಎರಡು ವಿಚಾರಗಳೇ ಆಪ್ನ ಜನಪ್ರಿಯತೆಗೆ ಮುಖ್ಯ ಕಾರಣಗಳು ಎನ್ನುವುದು ನಿರ್ವಿವಾದ. ಶಿಕ್ಷಣದಲ್ಲೂ ದೆಹಲಿ ಸರ್ಕಾರ ಆಮೂಲಾಗ್ರ ಬದಲಾವಣೆ ತಂದಿರು ವುದಾಗಿ ಹೇಳಿಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯ ಸರ್ಕಾರಿ ಶಾಲೆಗಳ ಫಲಿತಾಂಶಗಳು ಗಮನಾರ್ಹವಾಗಿ ಬದಲಾಗಿವೆ ಎನ್ನುವುದೂ ಸತ್ಯ. ಆದರೆ, ಈ ಮಟ್ಟವು ಆಪ್ ತೋರಿಸಿಕೊಳ್ಳುತ್ತಿರುವಷ್ಟು ಎತ್ತರದಲ್ಲಿಲ್ಲ ಎನ್ನುವುದು ಕಾಂಗ್ರೆಸ್ ಮತ್ತು ಬಿಜೆಪಿಯ ವಾದ. ದೆಹಲಿಯ ಸರ್ಕಾರಿ ಶಾಲೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುವಂಥ ವಿಡಿಯೋಗಳನ್ನು ಬಿಜೆಪಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ.
ಬಿಜ್ಲಿ ಹಾಫ್, ಪಾನಿ ಮಾಫ್
ಆಪ್ 2015ರ ಚುನಾವಣೆಯಲ್ಲಿ ಬಿಜ್ಲಿ ಹಾಫ್, ಪಾನಿ ಮಾಫ್(ವಿದ್ಯುತ್ ಮೇಲಿನ ಶುಲ್ಕ ಅರ್ಧದಷ್ಟು ಕಡಿತ, ನೀರಿನ ಸರಬರಾಜು ಉಚಿತ) ಎಂಬ ಭರವಸೆ ನೀಡಿ ಅಮೋಘ ಜಯ ಸಾಧಿಸಿತ್ತು. ಆಪ್ನ ಈ
ಜನಪ್ರಿಯ ನಡೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಮೇಲೆ ಈಗಲೂ ಅಪರಿಮಿತ ಒತ್ತಡ ಹೇರುತ್ತಿವೆ.
ಕಳೆದ ನಾಲ್ಕೂವರೆ ವರ್ಷಗಳ ಆಪ್ ಆಡಳಿತಾವಧಿಯಲ್ಲಿ ದೆಹಲಿಯ 42 ಲಕ್ಷ ಕುಟುಂಬಗಳು ವಿದ್ಯುತ್ ಸಬ್ಸಿಡಿ ಸ್ಕೀಮಿನ ಫಲಾನುಭವಿಗಳಾಗಿವೆ. ಇದರರ್ಥ, ದೆಹಲಿಯ ಶೇ. 80 ಬಳಕೆದಾರರು, 50 ಪ್ರತಿಶತ ವಿದ್ಯುತ್ ಸಬ್ಸಿಡಿಯ ಫಲಾನುಭವಿಗಳಾಗಿದ್ದಾರೆ ಎಂದರ್ಥ. ಆರು ತಿಂಗಳ ಹಿಂದಷ್ಟೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 200 ಯೂನಿಟ್ಗಳವರೆಗೆ ಅಥವಾ 800 ರೂಪಾಯಿಗಳವರೆಗೆ ವಿದ್ಯುತ್ ಬಳಸುವವರಿಗೆ ಶುಲ್ಕ ವಿನಾಯಿತಿ ನೀಡುವ ಘೋಷಣೆ ಮಾಡಿದ್ದಾರೆ. ಪರಿಷ್ಕೃತ ಸಬ್ಸಿಡಿಯಿಂದಾಗಿ ದೆಹಲಿ ಸರ್ಕಾರದ ಮೇಲೆ ವಾರ್ಷಿಕ 2,250 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ. ಆದರೂ, ಈ ವಿಚಾರದಲ್ಲಿ ಆಪ್ ಹಿಂದೆ ಹೆಜ್ಜೆಯಿಡುವ ಸಾಧ್ಯತೆ ಗೋಚರಿಸುತ್ತಿಲ್ಲ. ವಿದ್ಯುತ್ ಸಬ್ಸಿಡಿಯ ಫಲಾನುಭವಿಗಳ ಸಂಖ್ಯೆ ಎಷ್ಟಿದೆಯೆಂದರೆ, ಆಪ್ನ ವಿದ್ಯುತ್ ಮತ್ತು ನೀರಿನ ಸಬ್ಸಿಡಿಯ ಕಟು ಟೀಕಾಕಾರರಾಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಈಗ ಜನರ ಮುನಿಸು ಕಟ್ಟಿಕೊಳ್ಳುವ ರಿಸ್ಕ್ಗೆ ಸಿದ್ಧವಿಲ್ಲ. ಆದರೆ ಈ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. (2013ರ ಚುನಾವಣೆಯಲ್ಲಿ ಕಮಲ ಪಕ್ಷ ವಿದ್ಯುತ್ ಶುಲ್ಕದಲ್ಲಿ 30 ಪರ್ಸೆಂಟ್ ಕಡಿತದ ಭರವಸೆ ನೀಡಿತ್ತು)
ಸಬ್ಸಿಡಿ ರಾಜಕಾರಣ
-“”ಆಮ್ ಆದ್ಮಿ ಪಾರ್ಟಿ ಈ ವರ್ಷದ ಮಾರ್ಚ್ ತಿಂಗಳಿಗೆ ತನ್ನ ವಿದ್ಯುತ್ ಸಬ್ಸಿಡಿ ಸ್ಕೀಮನ್ನು ನಿಲ್ಲಿಸಿಬಿಡುತ್ತದೆ” ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ.
– ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್, “ಬಿಜೆಪಿಯ ವಾದ ಸುಳ್ಳು, ಒಂದು ವೇಳೆ ಆಪ್ ಮತ್ತೆ ಅಧಿಕಾರಕ್ಕೆ ಬಂದರೆ, ವಿದ್ಯುತ್ ಸಬ್ಸಿಡಿಯನ್ನು 5 ವರ್ಷ ಮುಂದುವರಿಸುವುದಾಗಿ’ ಹೇಳಿ ಕಳೆದ ವಾರವಷ್ಟೇ ಗ್ಯಾರಂಟಿ ಕಾರ್ಡ್ ವಿತರಿಸಿದ್ದಾರೆ.
– ಇನ್ನೊಂದೆಡೆ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ತಾವು ಕೇಜ್ರಿವಾಲ್ ಸರ್ಕಾರ ಘೋಷಿಸಿರುವುದಕ್ಕಿಂತಲೂ 5 ಪಟ್ಟು ಹೆಚ್ಚು ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದರಾದರೂ, ದೆಹಲಿ ಚುನಾವಣೆಯ ಉಸ್ತುವಾರಿ ಹೊತ್ತಿರುವ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತ್ರ ಮನೋಜ್ ತಿವಾರಿಯವರ ಮಾತನ್ನು ತಳ್ಳಿಹಾಕಿದ್ದಾರೆ.
– ಕಾಂಗ್ರೆಸ್ ಕೂಡ 400-600 ಯೂನಿಟ್ ವಿದ್ಯುತ್ ಬಳಸುವವರಿಗೆ
ಸಬ್ಸಿಡಿ ನೀಡುವುದಾಗಿ ಹೇಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ