ಸಿರ್ಸಾ : ಅತ್ಯಾಚಾರಿ ಡೇರಾ ಬಾಬಾ ಆಶ್ರಮಕ್ಕೆ ಸೇನೆ ಮುತ್ತಿಗೆ
Team Udayavani, Aug 26, 2017, 12:41 PM IST
ಸಿರ್ಸಾ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ನ ಆಶ್ರಮಕ್ಕೆ ಶನಿವಾರ ಸೇನೆ ಮುತ್ತಿಗೆ ಹಾಕಿದೆ.
ಸಿರ್ಸಾದಲ್ಲಿರುವ ಆಶ್ರಮಕ್ಕೆ ಸಾವಿರಾರು ಸಿಆರ್ಪಿಎಫ್ ಪಡೆಯ ಯೋಧರು ಮುತ್ತಿಗೆ ಹಾಕಿದ್ದು , ಆಶ್ರಮದ ಒಳಗಿದ್ದ ಬಾಬಾ ಭಕ್ತರನ್ನು ಸ್ಥಳದಿಂದ ತೆರವು ಮಾಡಿದ್ದಾರೆ.
ಸೈನಿಕರ ಮೇಲೂ ಕಲ್ಲು
ಸೈನಿಕರು ಆಶ್ರಮಕ್ಕೆ ಮುತ್ತಿಗೆ ಹಾಕುವ ವೇಳೆ ಉದ್ರಿಕ್ತ ಭಕ್ತರು ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಬಾಬಾ ದೋಷಿ ಎಂದು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದು 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್, ದೆಹಲಿ, ರಾಜಸ್ಥಾನಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.
8 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ
ಬಬಾ ಬಂಧನಕ್ಕೆ ತೀವ್ರ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಬಾಬಾನ 6 ಮಂದಿ ಖಾಸಗಿ ಅಂಗರಕ್ಷಕರು , ಇಬ್ಬರು ಭಕ್ತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದೇ ವೇಳೆ ಶನಿವಾರ ಸಿರ್ಸಾ ಆಶ್ರಮದಲ್ಲಿ 15 ಮಂದಿ ಪುಂಡ ಭಕ್ತರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.