ಪಾಕ್ಗೆ ಆಘಾತಕ್: ಗಡಿ ದಾಟಿ ವಿಕ್ರಮ ಮೆರೆದ ಭಾರತೀಯ ಸೇನೆ
Team Udayavani, Dec 27, 2017, 6:00 AM IST
ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಶನಿವಾರ ಪಾಕಿಸ್ಥಾನ ದಾಳಿ ನಡೆಸಿ ಮೇಜರ್ ಸೇರಿ ನಾಲ್ವರು ಯೋಧರನ್ನು ನಿರ್ದಯದಿಂದ ಕೊಂದು ಹಾಕಿದ್ದಕ್ಕೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ.
ಸೋಮವಾರ ಸಂಜೆ ಆರು ಗಂಟೆ ವೇಳೆಗೆ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ 200-300 ಮೀಟರ್ ದೂರ ಪ್ರವೇಶ ಮಾಡಿ ಮೂವರು ಪಾಕಿಸ್ಥಾನಿ ಸೈನಿಕರನ್ನು ಕೊಂದು ಹಾಕಿದೆ. ಘಟನೆಯಲ್ಲಿ ಒಬ್ಬ ಗಾಯಗೊಂಡಿದ್ದಾನೆ. ಜತೆಗೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಸೈನಿಕರ ಅಕ್ರಮ ಪೋಸ್ಟ್ಗಳನ್ನು ನಾಶ ಮಾಡಲಾಗಿದೆ.
ಕುತೂಹಲಕಾರಿ ಅಂಶವೆಂದರೆ ಪಾಕಿಸ್ಥಾನದ ಪತ್ರಿಕೆಗಳು ಕುಲಭೂಷಣ ಜಾಧವ್ ಕುಟುಂಬ ಸದಸ್ಯರ ಭೇಟಿಗೆ ಅವ ಕಾಶ ಮಾಡಿ ಕೊಟ್ಟದ್ದಕ್ಕೆ ತನ್ನ ದೇಶದ ಮೂವರು ಸೈನಿಕರನ್ನು ಭಾರತ ಕೊಂದಿದೆ ಎಂದು ದಾಳಿಯನ್ನು ಒಪ್ಪಿಕೊಂಡಿದೆ.
ಕಣಿವೆ ರಾಜ್ಯದ ಪೂಂಛ… ವಲಯಕ್ಕೆ ಹೊಂದಿಕೊಂಡಿರುವ ಎಲ್ಒಸಿಯಲ್ಲಿ ಕೆಲವು ಅನಪೇಕ್ಷಿತ ಚಟುವಟಿಕೆಗಳು ನಡೆಯುತ್ತಿವೆ ಎಂದು ಗುಪ್ತಚರ ವರದಿಗಳು ಸೇನೆಯ ಕೈಸೇರಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿ ಭೀಕರ ಅನಾಹುತ ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ರಾವಲ್ಕೋಟ್ನಲ್ಲಿರುವ ಸೇನಾ ಪಡೆಯ “ಘಾತಕ್’ ಎನ್ನುವ ಕಮಾಂಡೋ ಪಡೆಯ ನಾಲ್ಕರಿಂದ ಐವರು ಸದಸ್ಯರ ತಂಡ ಸೋಮವಾರ ಸಂಜೆ ಆರು ಗಂಟೆಯ ಸುಮಾರಿಗೆ ಎಲ್ಒಸಿ ದಾಟಿತು. 45 ನಿಮಿಷಗಳವರೆಗೆ ಈ ಕಾರ್ಯಾಚರಣೆ ನಡೆಯಿತು. ಪಾಕಿಸ್ಥಾನ ಸೇನೆಯ 59 ಬ್ಲೌಚ್ ಸೇನಾ ಘಟಕವನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಯಿತು. ಶನಿವಾರ ಪಾಕಿಸ್ಥಾನ ಸೇನೆ ನಡೆಸಿದ ಮಾದರಿಯಲ್ಲಿಯೇ “ಘಾತಕ್’ ಪಡೆ ದಾಳಿ ನಡೆಸಿದೆ. ಈ ಘಟನೆಯಲ್ಲಿ ಭಾರತದ ಯೋಧರ ಕಡೆಯಿಂದ ಯಾವುದೇ ರೀತಿಯ ಸಾವು ನೋವು ಉಂಟಾಗಿಲ್ಲ.
ಪಾಕಿಸ್ಥಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಕುತಂತ್ರ ಮಾಡಿದರೆ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂಬ ಖಚಿತ ಸಂದೇಶ ರವಾನಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ. ಗಮನಾರ್ಹ ಅಂಶವೆಂದರೆ ಕಳೆದ ವರ್ಷದ ಸೆಪ್ಟಂಬರ್ 28ರಂದು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೆ „ಕ್ ನಡೆಸಿತ್ತು. ಆದರೆ ಶನಿವಾರ ನಡೆದ ದಾಳಿಯನ್ನು ಸೇನೆಯು ಈ ಹೆಸರಿನಿಂದ ಕರೆದುಕೊಂಡಿಲ್ಲ. ದಾಳಿ ನಡೆಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಂಡು ಅದನ್ನು ಅನುಷ್ಠಾನ ನಡೆಸುವ ಬಗ್ಗೆ ಸೇನೆಯ ಸ್ಥಳೀಯ ಘಟಕದ ಬ್ರಿಗೇಡಿಯರ್ ಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳಲಾಗಿತ್ತು.
ಉಗ್ರ ಬುರ್ಹಾನ್ ವಾನಿ ಹೊಗಳುವ ನಿಯತಕಾಲಿಕ ಮಾರುಕಟ್ಟೆಯಲ್ಲಿ: ಪಂಜಾಬ್ನ ಫತೇಘರ್ ಸಾಹಿಬ್ ಪಟ್ಟಣದಲ್ಲಿ ಉಗ್ರ ಬುರ್ಹಾನ್ ವಾನಿಯನ್ನು ಹೊಗಳುವ ನಿಯತಕಾಲಿಕ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ಈ ಅಂಶವನ್ನು ಖುದ್ದು ಪಂಜಾಬ್ ಮುಖ್ಯ ಮಂತ್ರಿ ಕ್ಯಾ| ಅಮರಿಂದರ್ ಸಿಂಗ್ ಅವರೇ ದೃಢಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ದೇಶ ವಿರೋಧಿ ಅಂಶಗಳಿದ್ದಲ್ಲಿ ಅದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ. ನಿಯತಕಾಲಿಕದಲ್ಲಿ ಮಾಜಿ ಸಿಎಂ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಜಗ್ತಾರ್ ಸಿಂಗ್ ಹವಾರಾನ ಬಗ್ಗೆ ಉಗ್ರ ಸಂಘಟನೆ ಐಸಿಸ್ ಹೊಗಳಿ ಬರೆದಿರುವುದನ್ನು ಪ್ರಸ್ತಾವಿಸಲಾಗಿದೆ.
ಸಾವಿನ ವ್ಯಾಪಾರಿ ಖತಂ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮತ್ತೂಂದು ಪ್ರಮುಖ ಸೇನಾ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಪ್ರಮುಖರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ ಒಬ್ಬನನ್ನು ನೂರ್ ಮೊಹಮ್ಮದ್ ತಾಂತ್ರಿ ಎಂದು ಗುರುತಿಸಲಾಗಿದೆ. 47 ವರ್ಷ ವಯಸ್ಸಿನ ಈತ ಕಣಿವೆ ರಾಜ್ಯದಲ್ಲಿ ಹಲವೆಡೆ ಉಗ್ರ ಚಟುವಟಿಕೆ ಚಿಗಿತುಕೊಳ್ಳಲು ಕಾರಣನಾಗಿದ್ದ. ಈ ಕಾರಣಕ್ಕಾಗಿಯೇ ಈತನನ್ನು ದಿಲ್ಲಿ ನ್ಯಾಯಾಲಯವೊಂದು “ಸಾವಿನ ವ್ಯಾಪಾರಿ’ ಎಂದು ಬಣ್ಣಿಸಿತ್ತು.
ಶ್ರೀನಗರ ಏರ್ ಪೋರ್ಟ್ನಲ್ಲಿರುವ ಬಿಎಸ್ಎಫ್ ಶಿಬಿರದ ಮೇಲೆ ನಡೆದಿದ್ದ ದಾಳಿ ಸಹಿತ ಪ್ರಮುಖ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಪುಲ್ವಾಮಾದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಆತನನ್ನು ಕಾರ್ಯಾಚರಣೆ ನಡೆಸಿ ಸಾಯಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ವಕ್ತಾರರು ಮಾತನಾಡಿ, ಇದೊಂದು ಪ್ರಮುಖ ಘಟ್ಟ ಎಂದು ಬಣ್ಣಿಸಿದ್ದಾರೆ.