ವಿವಾದಕ್ಕೀಡಾಯ್ತು ಕಮಲ್ ಬಿಗ್ ಬಾಸ್
Team Udayavani, Jul 13, 2017, 4:20 AM IST
ಚೆನ್ನೈ: ಬಹುಭಾಷಾ ನಟ ಕಮಲ್ಹಾಸನ್ ತಮಿಳು ಭಾಷೆಯ ಸ್ಟಾರ್ ವಿಜಯ ವಾಹಿನಿಯಲ್ಲಿ ಪ್ರಸ್ತುತ ಪಡಿಸುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಅದು ಭಾಷೆಯ ಸಂಸ್ಕೃತಿಗೆ ವಿರೋಧಿಯಾಗಿದೆ, ಆದ್ದರಿಂದ ಇದನ್ನು ನಿಷೇಧಿಸಿ. ನಿರೂಪಕರಾಗಿರುವ ಕಮಲ್ ಅದರಿಂದ ಹೊರಕ್ಕೆ ಬರಬೇಕೆಂದು ಸಂಘಟನೆ ಒತ್ತಾಯಿಸಿ, ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ಈ ಬಗ್ಗೆ ಕೆಂಡಾಮಂಡಲವಾಗಿರುವ ಕಮಲ್ ‘ನನ್ನನ್ನು ಬೇಕಿದ್ದರೆ ಬಂಧಿಸಲಿ. ಕಾರ್ಯಕ್ರಮದ ವಿರುದ್ಧ ವ್ಯಕ್ತವಾಗಿರುವ ಆರೋಪಗಳು ಸರಿಯಲ್ಲ. ನಮ್ಮ ನ್ಯಾಯವ್ಯವಸ್ಥೆ ಈ ಬಗ್ಗೆ ಗಮನ ಹರಿಸಲಿದೆ’ ಎಂದಿದ್ದಾರೆ.
ಹಿಂದೂ ಮಕ್ಕಳ್ ಕಚ್ಚಿ ಸಂಘಟನೆ ಪ್ರಕಾರ ಬಿಗ್ ಬಾಸ್ -ತಮಿಳು ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಕೀಳುಮಟ್ಟದಲ್ಲಿ ಮೂಡಿಬರುತ್ತದೆ. ಈ ಕಾರ್ಯಕ್ರಮದಿಂದ ತಮಿಳು ಸಂಸ್ಕೃತಿಗೆ ಮಾರಕವಾಗಲಿದೆ. ಅದಲ್ಲದೇ ಈ ಕಾರ್ಯಕ್ರಮದ ನಿರೂಪಕ ಕಮಲ್ ಹಾಸನ್ ಮತ್ತು ಸ್ಪರ್ಧಿ ಜ್ಯೂಲಿಯಾನಾರಿಗೆ ತಮಿಳು ಸಂಸ್ಕೃತಿ ಬಗೆಗೆ ಗೌರವವಿಲ್ಲ. ಕಮಲ್ ಧೋರಣೆಗಳು ಪಕ್ಷಪಾತದಿಂದ ಕೂಡಿರುತ್ತವೆ. ಅವರೊಬ್ಬ ಹಿಂದೂ ವಿರೋಧಿ. ಕಾರ್ಯಕ್ರಮದ ಮೂಲಕ ದ್ರಾವಿಡ ಮತ್ತು ಎಡಪಂಥೀಯ ವಿಚಾರಗಳಿಗೆ ಪ್ರಚಾರ ನೀಡುವರು ಎಂದಿದ್ದಾರೆ.