ಆರ್ಥರ್ ಜೈಲಿನಲ್ಲಿ ಮಲ್ಯಗೆ ಆತಿಥ್ಯ !
Team Udayavani, Nov 27, 2017, 6:00 AM IST
ಹೊಸದಿಲ್ಲಿ: ಸುಮಾರು 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲ ತೀರಿಸದೆ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿದರೆ, ಮುಂಬಯಿಯ ಆರ್ಥರ್ ರಸ್ತೆಯ ಜೈಲಿನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವುದಾಗಿ ಲಂಡನ್ನ ಕೋರ್ಟ್ಗೆ ಮುಂದಿನ ವಾರ ಭಾರತ ಸ್ಪಷ್ಟಪಡಿಸಲಿದೆ.
ಈ ವಿಷಯ ಕೋರ್ಟ್ಗೆ ಮನವರಿಕೆ ಮಾಡಿ ಕೊಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ. ಒಮ್ಮೆ ಅವರು ಭಾರತಕ್ಕೆ ಬಂದರೆ ಅವರ ಭದ್ರತೆ, ಸುರಕ್ಷತೆ ಎಲ್ಲವನ್ನೂ ಯಾವುದೇ ಲೋಪವಿಲ್ಲದಂತೆ ನೋಡಿಕೊಳ್ಳುತ್ತೇವೆ. ಇದರ ಬಗ್ಗೆ ಆತಂಕ ಬೇಡ ಎಂದು ಯುಕೆಯ ವೆಸ್ಟ್ ಮಿನ್ಸ್ಟರ್ ಕೋರ್ಟ್ಗೆ ಸರಕಾರ ಅರಿಕೆ ಮಾಡಲಿದೆ.
ಜಗತ್ತಿನ ಇತರ ದೇಶಗಳ ಜೈಲಿನಂತೆಯೇ ಭಾರತದ ಜೈಲುಗಳೂ ಇದ್ದು, ಕೈದಿಗಳಿಗೆ ಗರಿಷ್ಠ ಭದ್ರತೆ ನೀಡಲಾಗುತ್ತಿದೆ. ಅದರಲ್ಲೂ ಆರ್ಥರ್ ರಸ್ತೆಯಲ್ಲಿರುವ ಜೈಲು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದ್ದು, ಇಲ್ಲಿ ಮಲ್ಯ ಅವರ ಜೀವಕ್ಕೆ ಯಾವುದೇ ಅಪಾಯ ಆಗದು. ಭಾರತದ ಜೈಲಲ್ಲಿ ಭದ್ರತೆಯ ಕೊರತೆಯಿದೆ ಎಂಬ ಮಲ್ಯ ಪರ ವಕೀಲರ ವಾದವು ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಇಂಥ ಸುಳ್ಳು ಆರೋಪಗಳ ಮೂಲಕ ಗಡಿಪಾರಿನಿಂದ ತಪ್ಪಿಸಿಕೊಳ್ಳುವುದು ಮಲ್ಯ ಅವರ ಯೋಜನೆಯಾಗಿದೆ ಎಂದೂ ಭಾರತವು ಸ್ಪಷ್ಟಪಡಿಸಲಿದೆ. ಮಲ್ಯ ಗಡಿಪಾರು ಕುರಿತ ವಿಚಾರಣೆ ಡಿ. 4ರಿಂದ ಆರಂಭವಾಗಲಿದೆ.