ಕೃತಕ ಬುದ್ಧಿಮತ್ತೆ ದುರ್ಬಳಕೆ ಆಗದಿರಲಿ
ರೈಸ್ 2020 ಶೃಂಗದಲ್ಲಿ ಪ್ರಧಾನಿ ಮೋದಿ
Team Udayavani, Oct 6, 2020, 6:20 AM IST
ಹೊಸದಿಲ್ಲಿ: ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವಿದ್ದು, ಈ ತಂತ್ರಜ್ಞಾನವು ದುರುಪಯೋಗವಾಗದಂತೆ ರಕ್ಷಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ನೀತಿ ಆಯೋಗ ಆಯೋಜಿಸಿರುವ “ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ-RAISE-2020′ ಎಂಬ ವರ್ಚುವಲ್ ಶೃಂಗಸಭೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಭಾರತವು ಜಗತ್ತಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಕೇಂದ್ರವಾಗಬೇಕು ಎಂದು ನಾವು ಬಯಸುತ್ತೇವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಕೃಷಿ ವಲಯ, ಸ್ವಾಸ್ಥ್ಯ ಸೇವೆ, ಶಿಕ್ಷಣ ಕ್ಷೇತ್ರವನ್ನು ಸಶಕ್ತಗೊಳಿಸುವ ಜತೆಯಲ್ಲೇ, ಮುಂದಿನ ತಲೆಮಾರಿನ ನಗರಗಳ ಮೂಲಸೌಕರ್ಯಗಳನ್ನು ಸೃಷ್ಟಿಸಲು, ಟ್ರಾಫಿಕ್ ಜಾಮ್ ಕಡಿಮೆಗೊಳಿಸಲು, ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸಲು ಹಾಗೂ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ದೊಡ್ಡ ಪಾತ್ರ ನಿರ್ವಹಿಸಬಲ್ಲದು ಎಂದಿದ್ದಾರೆ.
“”ಈ ಶೃಂಗಸಭೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೇಲಿನ ಚರ್ಚೆಗೆ ಪ್ರೋತ್ಸಾಹ ನೀಡುವಲ್ಲಿ ಅತ್ಯುತ್ತಮ ಪ್ರಯತ್ನ ಎಂದೂ ಶ್ಲಾ ಸಿರುವ ಮೋದಿ, ಮಾನವ ಹಾಗೂ ಕೃತಕ ಬುದ್ಧಿಮತ್ತೆಯ ಟೀಂವರ್ಕ್ ಚಮತ್ಕಾರವನ್ನೇ ಸೃಷ್ಟಿಸಬಲ್ಲದು. ಆಲ್ಗಾರಿದಂನಲ್ಲಿ ಪಾರದರ್ಶಕತೆಕಾಯ್ದುಕೊಳ್ಳುವುದು ಈ ತಂತ್ರಜ್ಞಾನದ ಮೇಲಿನ ಭರವಸೆಯನ್ನು ಕಾಯ್ದುಕೊಳ್ಳುವ ಕೀಲಿಕೈ” ಎಂದಿದ್ದಾರೆ. ಇದೇ ವೇಳೆಯಲ್ಲೇ ಸಮಾಜಘಾತುಕ ಶಕ್ತಿಗಳಿಗೆ ಅದು ಅಸ್ತ್ರವಾಗಿ ಬದಲಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಪ್ರಪಂಚದ ಮೇಲಿದೆ ಎಂದಿದ್ದಾರೆ.