ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ: ಸಿಎಂ ಹಿಮಂತ ಬಿಸ್ವಾ ಶರ್ಮಾ
Team Udayavani, Aug 4, 2022, 2:25 PM IST
ಗುವಾಹಟಿ : ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ತಿಂಗಳಲ್ಲಿ ಬಾಂಗ್ಲಾ ಮೂಲದ ಉಗ್ರ ಸಂಘಟನೆ ಅನ್ಸಾರುಲ್ ಇಸ್ಲಾಂನೊಂದಿಗೆ ಸಂಪರ್ಕ ಹೊಂದಿರುವ ಐದು ಪ್ರಕರಣಗಳೊಂದಿಗೆ ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿರುವುದು ಕಂಡು ಬಂದಿದೆ. ಅನ್ಸಾರುಲ್ ಇಸ್ಲಾಂಗೆ ಸೇರಿದ ಆರು ಬಾಂಗ್ಲಾದೇಶಿ ಉಗ್ರರು ಯುವಕರಿಗೆ ಉಗ್ರ ತರಬೇತಿ ನೀಡಲು ಅಸ್ಸಾಂಗೆ ಪ್ರವೇಶಿಸಿದ್ದಾರೆ ಮತ್ತು ಈ ವರ್ಷ ಮಾರ್ಚ್ನಲ್ಲಿ ಬಾರ್ಪೇಟಾದಲ್ಲಿ ಓರ್ವನನ್ನು ಮಾತ್ರ ಬಂಧಿಸಲಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ನಿಗೂಢ ಸ್ಥಳಗಳಲ್ಲಿ ಹಲವು ಜಿಹಾದಿ ತರಬೇತಿ ಶಿಬಿರಗಳನ್ನು ಬಾಂಗ್ಲಾ ಮೂಲದ ಉಗ್ರರು ನಡೆಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ರಾಜ್ಯದ ಹೊರಗಿನ ಇಮಾಮ್ಗಳಿಂದ ಖಾಸಗಿ ಮದರಸಾಗಳಲ್ಲಿ ತರಬೇತಿ ನೀಡುತ್ತಿರುವುದು ಆತಂಕಕಾರಿಯಾಗಿದೆ.ಈ ಜಿಹಾದಿ ಚಟುವಟಿಕೆಯು ಭಯೋತ್ಪಾದಕ ಅಥವಾ ಬಂಡಾಯ ಚಟುವಟಿಕೆಗಳಿಗಿಂತ ಬಹಳ ಭಿನ್ನವಾಗಿದೆ. ಹಲವಾರು ವರ್ಷಗಳಿಂದ ಇಸ್ಲಾಮಿಕ್ ಮೂಲಭೂತವಾದವನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿದೆ ಮತ್ತು ಅಂತಿಮವಾಗಿ ವಿಧ್ವಂಸಕ ಚಟುವಟಿಕೆಗಳತ್ತ ತಿರುಗುತ್ತದೆ” ಎಂದು ಸಿಎಂ ಹೇಳಿದ್ದಾರೆ.