21ದಿನ ಲಾಕ್ ಡೌನ್;Covid ಸೋಂಕಿತ ವ್ಯಕ್ತಿ ಅಂತ್ಯ ಸಂಸ್ಕಾರ ಕುಟುಂಬ ವರ್ಗಕ್ಕೆ ಅವಕಾಶ ಇಲ್ಲ
ಈ ವೃದ್ಧನ ಮನೆಯವರನ್ನು ಇದೀಗ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Team Udayavani, Mar 30, 2020, 1:44 PM IST
Representative Image
ಹೈದರಾಬಾದ್:ದೇಶದಲ್ಲಿ ಮಾರಣಾಂತಿಕ ಕೋವಿಡ್ 19 ಸೋಂಕಿಗೆ 29 ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಏತನ್ಮಧ್ಯೆ ಹೈದರಬಾದ್ ನಲ್ಲಿ ಶನಿವಾರ ಸಾವನ್ನಪ್ಪಿರುವ 74ವರ್ಷದ ತೆಲಂಗಾಣದ ವ್ಯಕ್ತಿಯ ರಕ್ತ ಮಾದರಿಯನ್ನು ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ಇದ್ದಿರುವುದು ಪತ್ತೆಯಾಗಿದೆ. ನಂತರ ಆ ವ್ಯಕ್ತಿಯ ಶವ ಸಂಸ್ಕಾರ ನಡೆಸಲು ಕುಟುಂಬ ಸದಸ್ಯರಿಗೆ ಅವಕಾಶ ನೀಡದೆ ಕೇವಲ ವೈದ್ಯಕೀಯ ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಈ ವೃದ್ಧನ ಮನೆಯವರನ್ನು ಇದೀಗ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 21ದಿನಗಳ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎಲ್ಲಿಯಾದರು ಸಾವು ಸಂಭವಿಸಿದರೆ 20 ಜನಕ್ಕಿಂತ ಹೆಚ್ಚು ಮಂದಿ ಸೇರಲು ಅವಕಾಶ ಇಲ್ಲ ಎಂಬ ಸೂಚನೆ ಇದ್ದಿರುವುದಾಗಿ ವರದಿ ಹೇಳಿದೆ.
ಈ ವ್ಯಕ್ತಿಗೆ ಕೋವಿಡ್ 19 ಸೋಂಕು ಇದ್ದಿರುವುದು ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಬಳಿಕ ತಿಳಿದು ಬಂದಿದ್ದು, ವೃದ್ಧನಿಗೆ ಇತರ ಅನಾರೋಗ್ಯ ಕೂಡಾ ಇದ್ದಿರುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಚಂದ್ರಶೇಖರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.