ಸುಷ್ಮಾ, ಜೇಟ್ಲಿ ನಿಧನಕ್ಕೆ ವಿಪಕ್ಷಗಳ ಮಾಟ, ಮಂತ್ರ ಕಾರಣವಂತೆ! ಸಾಧ್ವಿ ಪ್ರಗ್ಯಾ ಆರೋಪವೇನು?
Team Udayavani, Aug 26, 2019, 7:20 PM IST
ನವದೆಹಲಿ:ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಇದೀಗ, ಬಿಜೆಪಿಯ ಘಟಾನುಘಟಿ ನಾಯಕರ ಸಾವಿಗೆ ವಿಪಕ್ಷಗಳ ಮಾಟ, ಮಂತ್ರವೇ ಕಾರಣ ಎಂದು ಆರೋಪಿಸಿದ್ದಾರೆ!
ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದೇನು?
ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿಯೇ ನನಗೆ ಮಹಾರಾಜ್ ಜೀ ಎಚ್ಚರಿಕೆ ಕೊಟ್ಟಿದ್ದರು. ನೀನು ಪ್ರಾರ್ಥನೆಯ ಮೂಲಕ ನಿನ್ನ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಮುಂದೆ ವಿಪಕ್ಷಗಳಿಂದ ಕೆಟ್ಟ ಗಳಿಗೆ ಕಾದಿದೆ. ಅವರು ಬಿಜೆಪಿ ವಿರುದ್ಧ ದುಷ್ಟ ಶಕ್ತಿಯನ್ನು ಪ್ರಯೋಗಿಸುವ ಸಾಧ್ಯತೆ ಇದೆ. ಇದರಿಂದ ಬಿಜೆಪಿಗೆ ನಷ್ಟ ಉಂಟಾಗಲಿದೆ. ಆದರೆ ನಾನು ಅವರ ಎಚ್ಚರಿಕೆಯನ್ನು ಮರೆತು ಬಿಟ್ಟಿದ್ದೆ!
ಆದರೆ ಇದೀಗ ಬಿಜೆಪಿಯ ಘಟಾನುಘಟಿ ಮುಖಂಡರನ್ನೇ ಕಳೆದುಕೊಳ್ಳುವಂತಾಗಿದೆ. ಮಹಾರಾಜ್ ಜೀ ಹೇಳಿದ ಮಾತಿನ ಬಗ್ಗೆ ನಾನು ಆಲೋಚಿಸುವಂತಾಗಿದೆ. ನನಗೂ ಕೂಡಾ ಎಚ್ಚರಿಕೆಯಿಂದ ಇರು ಎಂದು ಸಲಹೆ ನೀಡಿದ್ದರು ಎಂದು ಮಧ್ಯಪ್ರದೇಶ ಮಾಜಿ ಸಿಎಂ ಬಾಬುಲಾಲ್ ಗೌರ್ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದ್ದರು.
ಬಿಜೆಪಿಯ ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಮನೋಹರ್ ಪರ್ರೀಕರ್ ಅವರಂತಹ ನಾಯಕರು ನಮ್ಮನ್ನಗಲಿದ್ದಾರೆ. ನೀವು ಇದನ್ನು ನಂಬುವುದಾದರೆ ನಂಬಿ ಇಲ್ಲ ಬಿಡಿ. ಆದರೆ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರೆಲ್ಲ ವಿಪಕ್ಷ ನಾಯಕರ ಮಾಟ, ಮಂತ್ರದಿಂದಲೇ ಸಾವನ್ನಪ್ಪಿದ್ದಾರೆ ಎಂದು ದೂರಿದ್ದಾರೆ.
ಕಳೆದ ವಾರ ವಿಧಿವಶರಾಗಿದ್ದ ಬಾಬುಲಾಲ್ ಗೌರ್ ಅವರ ಸಂತಾಪ ಸಭೆಯಲ್ಲಿ ಪ್ರಗ್ಯಾ ಸಿಂಗ್ ಈ ಹೇಳಿಕೆ ನೀಡುವಾಗ ಬಿಜೆಪಿ ಮುಖಂಡರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯ ಮತ್ತು ಮಧ್ಯಪ್ರದೇಶದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಹಾಜರಿದ್ದರು.