ರೇಪ್ ಆರೋಪಿ BSP ಸಂಸದ ಅತುಲ್ ಕೊನೆಗೂ ಕೋರ್ಟ್ಗೆ ಶರಣು
ಸಂಸದ ಸ್ಥಾನ ಅನರ್ಹಗೊಳ್ಳುವ ಭೀತಿಯಲ್ಲಿದ್ದ ಅತುಲ್ ರಾಯ್
Team Udayavani, Jun 22, 2019, 1:22 PM IST
ವಾರಾಣಸಿ: ಅತ್ಯಾಚಾರ ಆರೋಪದಲ್ಲಿ ತಲೆ ಮರೆಸಿಕೊಂಡಿದ್ದ ಉತ್ತರಪ್ರದೇಶದ ಘೋಸಿ ಕ್ಷೇತ್ರದ ಬಿಎಸ್ಪಿ ಸಂಸದ ಅತುಲ್ ರಾಯ್ ಶನಿವಾರ ವಾರಾಣಸಿಯ ಕೋರ್ಟ್ ಎದುರು ಶರಣಾಗಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಲೋಕಸಭಾ ಚುನಾವಣಾ ಮತದಾನಕ್ಕೆ ಕೆಲವೇ ದಿನಗಳಿರುವ ವೇಳೆ ಮಹಿಳೆಯೊಬ್ಬರು ರಾಯ್ ವಿರುದ್ಧ ರೇಪ್ ಆರೋಪ ಮಾಡಿದ್ದರು. ಆ ಬಳಿಕ ಬಂಧನ ಭೀತಿಯಲ್ಲಿ ರಾಯ್ ತಲೆ ಮರೆಸಿಕೊಂಡಿದ್ದರು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 1.22 ಲಕ್ಷ ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. ನನಗೆ ಜನತಾ ನ್ಯಾಯಾಲಯದಲ್ಲಿ ನಿರ್ದೋಷಿ ಎಂಬ ತೀರ್ಪು ಬಂದಿದೆ ಎಂದು ಫೇಸ್ ಬುಕ್ನಲ್ಲಿ ಹೇಳಿಕೊಂಡಿದ್ದರು.
ರಾಯ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.
ಆಯ್ಕೆಯಾದ 60 ದಿನಗಳ ಒಳಗೆ ಸಂಸತ್ನಲ್ಲಿ ಪ್ರಮಾಣವಚನ ಸ್ವೀಕರಿಸಬೇಕಾದ ಕಾನೂನಿನ ಹಿನ್ನಲೆಯಲ್ಲಿ ರಾಯ್ ಒತ್ತಡಕ್ಕೆ ಸಿಲುಕಿದ್ದರು. ಕೊನೆಗೂ ಕೋರ್ಟ್ಗೆ ಹಾಜರಾಗಿದ್ದು, ತನಿಖೆ ಎದುರಿಸಬೇಕಾಗಿದೆ.