ಅಯೋಧ್ಯೆ ರೀತಿಯೇ “ಅಯ್ಯಪ್ಪ ದೇಗುಲ’ ತೀರ್ಪು?
Team Udayavani, Nov 10, 2019, 5:02 AM IST
ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಪ್ರಕಟಿಸಿರುವ ತೀರ್ಪಿನ ರೀತಿಯೇ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಮರು ಪರಿಶೀಲನೆ ಪ್ರಕರಣದಲ್ಲೂ ತೀರ್ಪು ಹೊರ ಬರುವ ಸಾಧ್ಯತೆ ಇದೆ ಎಂದು ರಾಮಲಲ್ಲಾ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆ ವಿಷಯದಲ್ಲಿ ಜಾಗದ ಮಾಲಕತ್ವಕ್ಕಿಂತ ರಾಮನಿದ್ದಾನೆ ಎಂಬ ಹಿಂದೂಗಳ ಭಾವನೆಗಳನ್ನು ಪರಿಗಣಿಸಿರುವುದನ್ನು ಕಾಣಬಹುದು. ನಂಬಿಕೆಗಳನ್ನು ಪ್ರಶ್ನೆ ಮಾಡಲು ಸಾಧ್ಯ ವಿಲ್ಲ.. ಇದೇ ಮಾದರಿಯಲ್ಲಿ ಅಯ್ಯಪ್ಪ ದೇಗುಲದ ವಿಷಯದಲ್ಲೂ ತೀರ್ಪು ಹೊರಬರಲಿದೆ ಎಂದು ವಕೀಲ ಕೆ.ಎನ್. ಭಟ್ ತಿಳಿಸಿದ್ದಾರೆ.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಅರ್ಜಿಯ ವಾದದಲ್ಲಿ ನಂಬಿಕೆಯೇ ಪ್ರಧಾನವಾಗಿದೆ. ಆದರೆ, ಈ ವಾದವನ್ನು ಕಳೆದ ವರ್ಷ ನ್ಯಾಯಾಲಯ ಸ್ವೀಕರಿಸಲಿಲ್ಲ. ಮಹಿಳೆ ಯರ ಪ್ರವೇಶವನ್ನು ನಿರ್ಬಂಧಿಸಿರುವುದಕ್ಕೆ ವೈಜ್ಞಾನಿಕ ಕಾರಣಗಳು ಇರುವುದಿಲ್ಲ. ಭಕ್ತರ ಭಾವನೆ ಹಾಗೂ ನಂಬಿಕೆಗಳು ಮುಖ್ಯವಾಗಿರುತ್ತವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠವು, ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ತೀರ್ಪು ನೀಡಿತ್ತು.