ಬಾಲಾಕೋಟ್ ಉಗ್ರರ ಕಾರ್ಖಾನೆಗೆ ಮತ್ತೆ ಚಾಲನೆ
ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆ ನಾಶಗೈದಿದ್ದ ಪಾಕ್ನ ಉಗ್ರರ ತರಬೇತಿ ಕೇಂದ್ರ
Team Udayavani, Sep 23, 2019, 5:50 AM IST
ಹೊಸದಿಲ್ಲಿ: ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯಗೊಳಿಸುವಲ್ಲಿ ಪದೇ ಪದೆ ಪ್ರಯತ್ನಿಸಿ ಸೋತು ಸುಣ್ಣವಾಗಿರುವ ಪಾಕಿಸ್ಥಾನವು ಈಗ ಭಾರತದ ವಿರುದ್ಧ ತನ್ನ ಉಗ್ರವಾದಿಗಳನ್ನು ಛೂಬಿಡಲು ಮುಂದಾಗಿದೆ.
ಇದೇ ವರ್ಷ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ದಾಳಿಯಿಂದ ಸಂಪೂರ್ಣ ನಾಶವಾಗಿದ್ದ ಬಾಲಾಕೋಟ್ನಲ್ಲಿನ ಜೈಶ್-ಎ- ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ತರಬೇತಿ ಶಿಬಿರ ಈಗ ಭಾರತದಲ್ಲಿ ಕುಕೃತ್ಯ ನಡೆಸುವ ಸಲುವಾಗಿಯೇ ಮತ್ತೆ ತಲೆಯೆತ್ತಿ ನಿಂತಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ಸರಕಾರ ಹಿಂಪಡೆದ ಬಳಿಕ ಈ ತರಬೇತಿ ಶಿಬಿರಕ್ಕೆ ಪುನರ್ಜೀವ ನೀಡಿರುವುದು ಗಮನಾರ್ಹ. 370ನೇ ಕಲಂ ಹಿಂಪಡೆದಾಗ ಪ್ರತಿಕ್ರಿಯಿಸಿದ್ದ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್, ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಅವ್ಯಾಹತವಾಗಿ ನಡೆಯಲಿದೆ ಎಂದು ಭಾರತಕ್ಕೆ ಧಮಕಿ ಹಾಕಿದ್ದರು. ಅದನ್ನು ಈಗ ಕಾರ್ಯಗತಗೊಳಿಸುವ ಕೆಲಸಕ್ಕೆ ಪಾಕಿಸ್ಥಾನ ಕೈಹಾಕಿದೆ.
14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ವಾಹನಗಳ ಮೇಲೆ ನಡೆಸಲಾಗಿದ್ದ ಉಗ್ರರ ದಾಳಿಗೆ ಪ್ರತೀ ಕಾರವಾಗಿ ಭಾರತೀಯ ವಾಯು ಪಡೆಯು ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದ್ಗೆ ಸಮೀಪವಿರುವ ಬಾಲಾಕೋಟ್ನಲ್ಲಿದ್ದ ಜೈಶ್-ಎ- ಮೊಹಮ್ಮದ್ ಉಗ್ರ ಸಂಘ ಟನೆಯ ತರಬೇತಿ ಶಿಬಿರದ ಮೇಲೆ ಫೆ. 27ರಂದು ವಾಯು ದಾಳಿ ನಡೆಸಿ, ಅದನ್ನು ಧ್ವಂಸಗೊಳಿಸಿತ್ತು.
ದಾಳಿಗೆ ಯೋಜನೆ
ಭಾರತದ ಗುಪ್ತಚರ ಮಾಹಿತಿಗಳ ಪ್ರಕಾರ, ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಮರು ದಿನವೇ ಇಸ್ಲಾಮಾಬಾದ್ನಲ್ಲಿ ಜೆಇಎಂ ಕಮಾಂಡರ್ ಮುಫ್ತಿ ಅಬ್ದುಲ್ ರವೂಫ್ ಅಸ^ರ್ ಹಾಗೂ ಪಾಕಿಸ್ಥಾನದ ಐಎಸ್ಐ ಅಧಿಕಾರಿಗಳ ಜತೆಗೆ ರಾವಲ್ಪಿಂಡಿಯಲ್ಲಿ ಸಭೆ ನಡೆದಿತ್ತು. ಈ ಬಾರಿ ಜಮ್ಮು-ಕಾಶ್ಮೀರ ಮಾತ್ರವಲ್ಲದೆ, ದೇಶದ ಹಲವಾರು ಭಾಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ಯೋಜನೆ ರೂಪಿಸುತ್ತಿವೆ.
ದೌರಾ ತರ್ಬಿಯಾ ಮಾದರಿ ದಾಳಿ
ಈಗಾಗಲೇ ಪೇಶಾವರ, ಜಮ್ರುದ್ನಲ್ಲಿರುವ ಉಗ್ರರ ತರಬೇತಿ ಶಿಬಿರಗಳ ಜತೆಯಲ್ಲೇ, ಬಹಾವಲ್ಪುರದಲ್ಲಿರುವ ಮರ್ಕಾಜ್ ಸುಭಾನ್ ಅಲ್ಲಾ, ಮರ್ಕಾಜ್ ಉಸ್ಮಾನ್-ಒ- ಅಲಿಯಲ್ಲಿನ ತರಬೇತಿ ಕೇಂದ್ರಗಳಲ್ಲಿ “ದೌರಾ ತರ್ಬಿಯಾ’ ಮಾದರಿ (ಶಸ್ತ್ರಾಸ್ತ್ರ ಬಳಕೆಯ ಪ್ರಾಥಮಿಕ ಜ್ಞಾನದ ಪ್ರಾತ್ಯಕ್ಷಿಕೆ) ತರಬೇತಿಗಳನ್ನು ಉಗ್ರರಿಗೆ ನೀಡಲಾಗಿದೆ. ಇದರ ಜತೆಗೆ ಮನ್ಶೇರಾ, ಗುಲ್ಪುರ್ ಹಾಗೂ ಕೋಲ್ಟಿಗಳಲ್ಲೂ ಉಗ್ರರಿಗೆ ತರಬೇತಿ ನೀಡಲಾಗಿದೆ.
ಒಟ್ಟಾರೆಯಾಗಿ 100ಕ್ಕೂ ಹೆಚ್ಚು ಉಗ್ರರ ತಂಡಗಳು ಭಾರತದೊಳಗೆ ನುಸುಳಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಜ್ಜಾಗಿ ನಿಂತಿವೆ. ಈ ಬಾರಿ ಶ್ರೀನಗರವು ಉಗ್ರರ ಟಾರ್ಗೆಟ್ ಪಟ್ಟಿಯಲ್ಲಿಲ್ಲ. ಬದಲಿಗೆ ಕಣಿವೆ ರಾಜ್ಯದ ಇನ್ನಿತರ ಪ್ರಾಂತ್ಯಗಳಾದ ಪೂಂಛ…, ರಜೌರಿ, ಜಮ್ಮುವಿನ ಸೇನಾ ಕ್ಯಾಂಪ್ಗ್ಳನ್ನು ಗುರಿಯಾಗಿಸಲಾಗಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ತಿಳಿಸಿದೆ.