ಪ್ರತಿ ಹಳ್ಳಿಗೂ ಬ್ಯಾಂಕಿಂಗ್
Team Udayavani, Jun 13, 2018, 10:10 AM IST
ಹೊಸದಿಲ್ಲಿ: ಜನ ಧನ ಯೋಜನೆಯ ಮೂಲಕ ನಾಗರಿಕರು ಬ್ಯಾಂಕಿಂಗ್ ವ್ಯಾಪ್ತಿಯೊಳಗೆ ಬರುವಂತೆ ಮಾಡಿದ ಕೇಂದ್ರ ಸರ್ಕಾರ, ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನಿರ್ಧರಿಸಿದೆ.
ಇಂಥದ್ದೊಂದು ಕನಸನ್ನು ಬಿಚ್ಚಿಟ್ಟಿರುವ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯೆಲ್, ದೇಶದ ಗ್ರಾಮಗಳಲ್ಲಿನ ಸುಮಾರು 2,90,000 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್ಸಿ ) ಬ್ಯಾಂಕುಗಳ ಕೌಂಟರ್ ತೆರೆಯಲು ಉದ್ದೇಶಿಸಲಾಗಿದ್ದು, ಈ ಮೂಲಕ ಪ್ರತಿ ಹಳ್ಳಿಯ ಪ್ರತಿ ಮನೆಯ ಸಮೀಪದಲ್ಲೇ ಬ್ಯಾಂಕ್ ಸೇವೆ ಸಿಗುವಂತೆ ಮಾಡಲು ನಿರ್ಧರಿಸಲಾಗಿದೆ. ದೂರ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಈ ಕೌಂಟರ್ಗಳಿಗೆ ವೈಫೈ ಸೌಲಭ್ಯ ಕಲ್ಪಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಇದಲ್ಲದೆ, ವಿದ್ಯುತ್ ಇಲಾಖೆಯ ಸಹಕಾರದೊಂದಿಗೆ ಹಳ್ಳಿಗಳ ಪ್ರತಿ ಮನೆಗೆ ಸೌರ ಫಲಕಗಳನ್ನು ಅಳವಡಿಸಿ, ಅವರಿಗೆ ಶಾಶ್ವತವಾಗಿ ಉಚಿತ ವಿದ್ಯುತ್ ನೀಡುವ ಆಲೋಚನೆಯೂ ಇದೆ” ಎಂದು ತಿಳಿಸಿದ್ದಾರೆ.
ರೈಲ್ವೆ ಮಾರ್ಗದ ದುರಸ್ತಿಗೆ ಕ್ರಮ: ರಾಷ್ಟ್ರೀಯ ಹೆದ್ದಾರಿಗಳಂತೆ ರೈಲು ಮಾರ್ಗಗಳನ್ನೂ ಬ್ಲಾಕ್ ಮಾದರಿಗೊಳಪಡಿಸುವ ಇರಾದೆ ಕೇಂದ್ರಕ್ಕಿದೆ ಎಂದು ರೈಲ್ವೆ ಸಚಿವರೂ ಆಗಿರುವ ಪಿಯೂಶ್ ಗೋಯೆಲ್ ತಿಳಿಸಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಖಾಸಗಿಯವರಿಗೆ ಮಣೆ ಹಾಕುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರದ ಹೊಸ ಕನಸನ್ನು ಹಂಚಿ ಕೊಂಡ ವಿತ್ತ ಸಚಿವ ಪಿಯೂಶ್ ಗೋಯಲ್ 2.9 ಲಕ್ಷ ಗ್ರಾಮಗಳ ಸಿಎಸ್ಸಿಗಳಲ್ಲಿ ಬ್ಯಾಂಕ್ ಕೌಂಟರ್ಗಳನ್ನು ಆರಂಭಿಸಲು ಚಿಂತನೆ