ಬರಿಗಾಲಲ್ಲಿ ನಡೆವ ಅಭ್ಯಾಸವೇ ಜೈಲು ಸೇರಿಸಿತು!
Team Udayavani, Sep 12, 2017, 12:22 PM IST
ಮುಂಬಯಿ: ಬರಿಗಾಲಲ್ಲಿ ನಡೆಯುವ ಅಭ್ಯಾಸವೇ ಈ ಕೊಲೆಗಡುಕನನ್ನು ಕಂಬಿ ಎಣಿಸುವಂತೆ ಮಾಡಿದೆ! ಪಶ್ಚಿಮ ಬಾಂದ್ರಾದ ಚಾಪೆಲ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಕಾವಲುಗಾರನಾಗಿದ್ದ ಅಂಜನಿ ತಿವಾರಿ ಎಂಬಾತ ಸೆ. 2ರಂದು ಕೊಲೆಯಾಗಿದ್ದ. ಅದಾಗಿ ಒಂದು ವಾರದೊಳಗೇ ಆರೋಪಿ ಸೆರೆಯಾಗಿದ್ದಾನೆ.
ತನಿಖೆಯ ವೇಳೆ ನನಗೆ ಸಿಸಿ ಟಿವಿ ದೃಶ್ಯಾವಳಿಯೊಂದು ಲಭ್ಯವಾಯಿತು. ಕತ್ತಲಲ್ಲಿ ವ್ಯಕ್ತಿಯೊಬ್ಬ ಬರಿಗಾಲಲ್ಲಿ ನಡೆದು ಹೋಗುತ್ತಿದ್ದ. ಈ ರೀತಿ ಬರಿಗಾಲಲ್ಲಿ ನಡೆಯುವ ಅಭ್ಯಾಸ ಯಾರಿಗಿದೆ ಎಂದು ಪರಿಶೀಲಿಸಿದಾಗ ಪಕ್ಕದಲ್ಲಿರುವ ಪಾತ್ರೆ ಅಂಗಡಿ ಮಾಲಕ ರಮೇಶ್ ಮಂಡೋಧ್ (43) ಎಂಬಾತನಿಗೆ ಅಂಥ ಅಭ್ಯಾಸವಿರುವುದು ತಿಳಿಯಿತು. ಈತನ ಅಂಗಡಿ ಮುಂದೆಯೇ ಇರುವ ಜವುಳಿ ಅಂಗಡಿಯೊಂದರಲ್ಲಿ ಅಂಜನಿ ತಿವಾರಿ ಕೆಲಸ ಮಾಡುತ್ತಿದ್ದ. ಇನ್ಸ್ಪೆಕ್ಟರ್ ಸಂಜೀವ ಭೋಲೆ ನೇತೃತ್ವದ ತಂಡ ಆರೋಪಿಯನ್ನು ವಿಚಾರಣೆಗೆ ಕರೆದಾಗಲೂ ಆತ ಬರಿಗಾಲಲ್ಲೇ ಬಂದ. ತೀವ್ರ ವಿಚಾರಣೆಗೆ ಗುರಿಪಡಿಸಿದಾಗ, ತನ್ನ ಪತ್ನಿಯೊಂದಿಗೆ ತಿವಾರಿ ಅನೈತಿಕ ಸಂಬಂಧ ಹೊಂದಿರುವ ಶಂಕೆ ಯಿಂದ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡ.
ವಿಚಿತ್ರವೆಂದರೆ, ಆರೋಪಿ ರಮೇಶ್ ತನ್ನ ಅಂಗಡಿಯಿಂದಲೇ ಹತ್ಯೆಗೆ ಚಾಕು ಬಳಸಿದ್ದ. ಅದನ್ನು ಒಂದು ವಾರ ಕಾಲ ಹರಿತ ಮಾಡುತ್ತಲೇ ಇದ್ದ. ಜವುಳಿ ಅಂಗಡಿಯ ಕೆಲಸ ಮುಗಿಸಿ, ಕಾವಲುಗಾರನ ಕೆಲಸಕ್ಕೆ ತೆರಳುತ್ತಿದ್ದಾಗ ಹಿಂಬಾಲಿಸಿ, ಚಾಪೆಲ್ ರಸ್ತೆಯಲ್ಲೇ ಅಡ್ಡಗಟ್ಟಿ, 12 ಸಲ ಇರಿದು ಹತ್ಯೆ ಮಾಡಿದ್ದ ಎಂಬುದಾಗಿ ಒಪ್ಪಿಕೊಂಡಿದ್ದಾನೆ ಎಂದು ವಲಯ 9ರ ಡಿಸಿಪಿ ಪರಮಜೀತ್ ಸಿಂಗ್ ದಹಿಯಾ ತಿಳಿಸಿದ್ದಾರೆ.