‘ದಯವಿಟ್ಟು ಪ್ರಾಣ ಕಳೆದುಕೊಳ್ಳಬೇಡಿ’ : ವಿದ್ಯಾರ್ಥಿಗಳಿಗೆ ಕೈ ಮುಗಿದು ಬೇಡಿಕೊಂಡ ಸಿಎಂ
Team Udayavani, Sep 15, 2021, 6:08 PM IST
ಚೆನ್ನೈ : ನೀಟ್ ಪರೀಕ್ಷೆಗೆ ಹೆದರಿ ಸಾವಿನ ದಾರಿ ತುಳಿಯುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಇಂದು (ಸೆ.15) ಮತ್ತೋರ್ವ ವಿದ್ಯಾರ್ಥಿ ( ವಾರದಲ್ಲಿ ಮೂರನೇ ಪ್ರಕರಣ) ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೆ ಮಾತನಾಡಿರುವ ಸಿಎಂ, ದಯವಿಟ್ಟು ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ. ನಿಮ್ಮಿಂದ ಅಸಾಧ್ಯವಾದದ್ದೂ ಯಾವುದು ಇಲ್ಲ. ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ. ಪೋಷಕರು ಕೂಡ ತಮ್ಮ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಮಾಡಬೇಕು. ಅದರ ಬದಲಾಗಿ ಅವರ ಒತ್ತಡ ಹೇರಬೇಡಿ ಎಂದು ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ಭಯದಿಂದ ಒಂದು ವಾರದಲ್ಲಿ ಮೂರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನೀಟ್ ಪರೀಕ್ಷೆ ರದ್ದು ಮಾಡುವ ಮಸೂದೆಯನ್ನೂ ಮಂಡಿಸಿದೆ.
ಎಂ. ಕೆ.ಸ್ಟಾಲಿನ್ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ನಿರ್ಣಯವನ್ನು ಮಂಡಿಸಿದರು. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಭಾನುವಾರ ನೀಟ್ ಪರೀಕ್ಷೆ ಆರಂಭವಾಗುವುದಕ್ಕಿಂತ ಕೆಲವೇ ಗಂಟೆಗಳ ಮೊದಲು 20 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಯಿಂದ ಸಾವಿಗೀಡಾದ ಪ್ರಕರಣದ ಮರುದಿನವೇ ಈ ಮಸೂದೆ ಮಂಡನೆ ಆಯಿತು. ಇದಕ್ಕೆ ಸರ್ವ ಪಕ್ಷಗಳು ಬೆಂಬಲ ಸೂಚಿಸಿದವು. ಸದನದಲ್ಲಿ ಬಿಲ್ ಪಾಸ್ ಆಗಿದ್ದು, ರಾಷ್ಟ್ರಪತಿಗಳ ಅಂಕಿತ ಬಾಕಿ ಇದೆ.