ಪ್ರಣಬ್, ನಾನಾಜಿ ದೇಶಮುಖ್, ಭೂಪೇನ್ ಹಜಾರಿಕಾಗೆ ಭಾರತ ರತ್ನ ಪ್ರದಾನ
Team Udayavani, Aug 8, 2019, 6:29 PM IST
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತೀಯ ಜನಸಂಘದ ನಾಯಕ ದಿ| ನಾನಾಜಿ ದೇಶಮುಖ್ ಮತ್ತು ಖ್ಯಾತ ಗಾಯಕ ದಿ| ಭೂಪೇನ್ ಹಜಾರಿಕಾ ಇವರಿಗೆ ಭಾರತ ರತ್ನವನ್ನು ಗುರುವಾರ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾರತದ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಿದರು. ಹಜಾರಿಕಾ ಅವರ ಪುತ್ರ ತೇಜ್, ದೇಶಮುಖ್ ಅವರ ಸಮೀಪದ ಬಂಧ ವೀರೇಂದ್ರಜಿತ್ ಸಿಂಗ್ ಅವರು ಪ್ರಶಸ್ತಿ ಸ್ವೀಕರಿಸಿದರು. ಹಜಾರಿಕಾ ಮತ್ತು ದೇಶಮುಖ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.
ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಕೇಂದ್ರ ಸಚಿವ ಸಂಪುಟದ ಹಲವು ಸಚಿವರು, ಅಸ್ಸಾಂ ಮುಖ್ಯಮಂತ್ರ ಸರ್ಬಾನಂದ ಸೋನಾವಲ್, ಇನ್ನಿತರ ಗಣ್ಯರು ಹಾಜರಿದ್ದರು.