ಬಿಹಾರಿಗಳು ಛತ್ ಪೂಜೆಗಾಗಿ ಮರಳುತ್ತಿದ್ದಾರೆ;ಓಡಿಹೋಗ್ತಿಲ್ಲ: ಅಲ್ಪೇಶ್
Team Udayavani, Oct 9, 2018, 5:21 PM IST
ಹೊಸದಿಲ್ಲಿ : ಬಿಹಾರ ಮತ್ತು ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಮೇಲೆ ಹಿಂಸಾತ್ಮಕ ದೌರ್ಜನ್ಯ ನಡೆಯುವುದಕ್ಕೆ ಕುಮ್ಮಕ್ಕು ನೀಡಿದರೆಂಬ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೋರ್ ಅವರು ಇದೀಗ ತನ್ನನ್ನು ಸಮರ್ಥಿಸಿಕೊಳ್ಳಲು “ವಲಸೆ ಕಾರ್ಮಿಕರು ಛತ್ ಪೂಜೆಗಾಗಿ ಗುಜರಾತಿನಿಂದ ತಮ್ಮ ಹುಟ್ಟೂರಿಗೆ ಮರಳುತ್ತಿದ್ದಾರೆಯೇ ವಿನಾ ಅವನ್ನು ಯಾರೂ ರಾಜ್ಯದಿಂದ ಹೊರಗಟ್ಟುತ್ತಿಲ್ಲ’ ಎಂದು ಹೇಳಿದ್ದಾರೆ.
ಬಿಹಾರಿಗಳು ತಮ್ಮ ರಾಜ್ಯಕ್ಕೆ ಮರಳಲು ತಾನು ಕಾರಣನೆಂಬ ಆರೋಪಗಳನ್ನು ಅಲ್ಲಗಳೆದಿರುವ ಅಲ್ಪೇಶ್ ಠಾಕೋರ್, “ನಿಜ ಏನೆಂದರೆ ಬಿಹಾರಿಗಳು ಹುಟ್ಟೂರಿಗೆ ಹೋಗಲು ಛತ್ ಪೂಜೆಗಾಗಿ ಈಗಾಗಲೇ ರಜೆ ಹಾಕಿದ್ದರು. ಆ ಪ್ರಕಾರ ಅವರೀಗ ತಮ್ಮ ಹುಟ್ಟೂರಿಗೆ ಮರಳುತ್ತಿದ್ದಾರೆ’ ಎಂದು ಹೇಳಿದರು.
ಸಬರ್ಕಾಂತಾ ಜಿಲ್ಲೆಯಲ್ಲಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ಬಿಹಾರಿ ವಲಸೆ ಕಾರ್ಮಿಕನೊಬ್ಬ ಅತ್ಯಾಚಾರ ನಡೆಸಿದ ಕಾರಣಕ್ಕೆ ಹಿಂದಿ ಭಾಷಿಕ ವಲಸೆ ಕಾರ್ಮಿಕರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ, ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ್ ಅಲ್ಪೇಶ್ ಠಾಕೋರ್ ಅವರು, “ಗುಜರಾತಿಗಳಿಗೆ ವಲಸೆ ಕಾರ್ಮಿಕರ ಬಗ್ಗೆ ಭಯ ಉಂಟಾಗಿದೆ. ಆದುದರಿಂದ ಸ್ಥಳೀಯರಿಗೇ ಸ್ಥಳೀಯ ಉದ್ಯೋಗಾವಕಾಶಗಳು ಸಿಗಬೇಕು’ ಎಂದು ಹೇಳಿದ್ದರು.
14 ತಿಂಗಳ ಹೆಣ್ಣುಮಗುವಿನ ಮೇಲಿನ ಅಮಾನುಷ ಅತ್ಯಾಚಾರದ ಘಟನೆಯನ್ನು ಅನುಸರಿಸಿ ಶಂಕಿತ ಬಿಹಾರಿ ವಲಸೆ ಕಾರ್ಮಿಕನೋರ್ವ ಅರೆಸ್ಟ್ ಆದುದನ್ನು ಅನುಸರಿಸಿ ಹಿಂದಿ ಭಾಷಿಕ ವಲಸೆ ಕಾರ್ಮಿಕರ ಮೇಲೆ, ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರ ವಿರುದ್ಧ ಹಿಂಸೆ ಸ್ಫೋಟಗೊಂಡಿತ್ತು.