ಸೇನಾ ಮುಖ್ಯಸ್ಥರ ಅಸ್ಸಾಂ ವಿವಾದ
Team Udayavani, Feb 23, 2018, 10:54 AM IST
ಗುವಾಹಾಟಿ: ಭಾರತದ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಬುಧವಾರ ದಿಲ್ಲಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಅಸ್ಸಾಂನಲ್ಲಿ ನಿರಂತರ ಪ್ರಕ್ಷುಬ್ಧ ಪರಿಸ್ಥಿತಿ ಇರುವಂತೆ ನೋಡಿಕೊಳ್ಳಲು ಪಾಕಿಸ್ಥಾನ, ಚೀನ ಪಿತೂರಿ ನಡೆಸಿವೆ. ಅದೇ ಕಾರಣಕ್ಕೆ ಬಾಂಗ್ಲಾದಿಂದ ಮುಸ್ಲಿಂ ಜನಸಂಖ್ಯೆ ಅಸ್ಸಾಂಗೆ ಹರಿದುಬರುತ್ತಿದೆ. ಇದರ ಪರಿಣಾಮ 80ರ ದಶಕದಲ್ಲಿ ಬಿಜೆಪಿ ಬೆಳೆದದ್ದಕ್ಕಿಂತ ತೀವ್ರವಾಗಿ ಎಐಯುಡಿಎಫ್ ಅಸ್ಸಾಂನಲ್ಲಿ ಬೆಳೆಯುತ್ತಿದೆ ಎಂದು ರಾವತ್ ಹೇಳಿದ್ದರು. ಇದನ್ನು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್, ಅಸಾದುದ್ದೀನ್ ಒವೈಸಿ, ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಟೀಕಿಸಿದ್ದಾರೆ.
ರಾವತ್ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಸಾಂವಿಧಾನಿಕ ಹೇಳಿಕೆ ನೀಡಿದ್ದಾರೆ. ಇದು ರಾಜಕಿಯ ಪ್ರೇರಿತ ಹೇಳಿಕೆ ಎಂದು ಬದ್ರುದ್ದೀನ್ ಹೇಳಿದ್ದಾರೆ. ಮತ್ತೂಂದು ಕಡೆ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ, ರಾವತ್ ಇಂತಹ ಹೇಳಿಕೆ ನೀಡಲು ಅವಕಾಶ ಕೊಟ್ಟಿರುವುದಕ್ಕೆ ಕೇಂದ್ರ ಸರಕಾರದ ವಿರುದ್ಧವೇ ಹರಿಹಾಯ್ದಿದ್ದಾರೆ.
ಸೇನೆ ಸ್ಪಷ್ಟನೆ
ವಿವಾದ ತೀವ್ರವಾದ ಅನಂತರ ಭಾರತೀಯ ಸೇನೆಯಿಂದ ಸ್ಪಷ್ಟನೆ ಬಂದಿದ್ದು, ರಾವತ್ ಹೇಳಿಕೆಯಲ್ಲಿ ಯಾವುದೇ ರಾಜ ಕೀಯ ಅಥವಾ ಧಾರ್ಮಿಕ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೇಳಿಕೆಗೆ ಕಾರಣ
1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಗಿನ್ನೂ ಅಂಬೆ ಗಾಲಿಡುತ್ತಿದ್ದ ಬಿಜೆಪಿ 2 ಸ್ಥಾನ ಗೆದ್ದಿತ್ತು. ಅದಕ್ಕೆ ಹೋಲಿಸಿದರೆ 2005ರಲ್ಲಿ ಸ್ಥಾಪನೆಯಾಗಿರುವ ಎಐಯುಡಿಎಫ್ ಪ್ರಸ್ತುತ 13 ಶಾಸಕರು, 3 ಲೋಕಸಭಾ ಸದಸ್ಯರನ್ನು ಹೊಂದಿದೆ. ಇದು ಅಕ್ರಮವಾಗಿ ಮುಸ್ಲಿಂ ಜನಸಂಖ್ಯೆ ಏರಿಕೆಯ ಪರಿಣಾಮ ಎನ್ನುವುದು ರಾವತ್ ಅಭಿಪ್ರಾಯ.