ದುರ್ಗೆ ನಾಡಿನಲ್ಲಿ ಕಮಲದ ವಿಜಯದಶಮಿ
Team Udayavani, May 24, 2019, 3:10 AM IST
ಕೋಲ್ಕತ: ಲೋಕಸಭೆ, ವಿಧಾನಸಭೆ ಎನ್ನದೇ ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಮಮತಾ ದೀದಿಯ ಯುಗಾಂತ್ಯಕ್ಕೆ ಸ್ಪಷ್ಟ ಸೂಚನೆಯೊಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರವಾನೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಂದೂ ನೆಲೆಯನ್ನೇ ಹೊಂದಿರದಿದ್ದ ಭಾರತೀಯ ಜನತಾ ಪಕ್ಷ, ಈ ಬಾರಿ 18 ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ 23 ಸ್ಥಾನ ಮಾತ್ರ ಗೆದ್ದಿದೆ. ಕಾಂಗ್ರೆಸ್ 1 ಸ್ಥಾನ ಗೆದ್ದಿದ್ದರೆ, ದಶಕಗಳ ಕಾಲ ರಾಜ್ಯವನ್ನು ಆಳಿದ ಸಿಪಿಎಂ ಒಂದೂ ಸ್ಥಾನ ಗೆಲ್ಲದ ದುರಂತ ಪರಿಸ್ಥಿತಿ ಎದುರಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಮತಾ ದೀದಿ ಪಕ್ಷ 34 ಸ್ಥಾನ ಗೆದ್ದಿತ್ತು. ಈ ಬಾರಿ ಅದು 11 ಸ್ಥಾನ ಕಳೆದುಕೊಂಡಿದೆ.
ಮತ್ತೂಂದು ಕಡೆ ಬಿಜೆಪಿ 2014ರಲ್ಲಿ ಕೇವಲ 2 ಸ್ಥಾನ ಗೆದ್ದಿದ್ದು, ಈ ಬಾರಿ ಹೆಚ್ಚುವರಿ 16 ಸ್ಥಾನಗಳಿಗೆ ಲಗ್ಗೆ ಹಾಕಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಅನಿರೀಕ್ಷಿತ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಅಲ್ಲಿ ಕೆಲ ಸ್ಥಾನ ನಷ್ಟವಾಗಿದೆ. ಇದರ ಸುಳಿವು ಹಿಡಿದಿದ್ದ ಬಿಜೆಪಿ, ನಷ್ಟವಾಗುವ ಸ್ಥಾನಗಳನ್ನು ಬಂಗಾಳದಲ್ಲಿ ಗೆಲ್ಲುವ ಕಾರ್ಯತಂತ್ರ ಮಾಡಿಕೊಂಡಿತ್ತು. ಆ ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ.
ಚುನಾವಣೆಗೂ ಮುನ್ನ ಬಿಜೆಪಿ, ಪಶ್ಚಿಮ ಬಂಗಾಳ ದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ಸರಣಿ ಆರೋಪ ಮಾಡಿತ್ತು. ಶಾರದಾ ಚಿಟ್ಫಂಡ್ ಹಗರಣದ ಭಾಗೀದಾರರನ್ನು ರಕ್ಷಿಸುವಲ್ಲಿ ಮಮತಾ ದೀದಿಯ ಕೃಪಾಹಸ್ತವಿದೆ ಎಂದು ಕೂಗಾಡಿತ್ತು. ಎರಡೂ ಪಕ್ಷಗಳ ನಡುವೆ ನಡೆದ ತಿಕ್ಕಾಟದಲ್ಲಿ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಗೇ ಧಕ್ಕೆಯಾಗಿತ್ತು. ಆದರೆ ಈ ಎಲ್ಲ ಘರ್ಷಣೆಗಳ ಸ್ಪಷ್ಟ ರಾಜಕೀಯ ಲಾಭ ಬಿಜೆಪಿಗೆ ಲಭಿಸಿದೆ. ದುರ್ಗೆಯ ನಾಡಾದ ಪಶ್ಚಿಮ ಬಂಗಾಳದಲ್ಲಿ ಕಮಲದ ಸಮೃದ್ಧ ಬೆಳೆ ಬಂದಿದೆ.
ದೀದಿ ನಿವಾಸ ಖಾಲಿ ಖಾಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಕಾರ್ಯಕರ್ತರು ಸಂಪೂರ್ಣ ಕಳಾಹೀನರಾದಂತೆ ಕಂಡುಬಂದರು. ಇದರ ಸ್ಪಷ್ಟ ಲಕ್ಷಣ ಕಂಡುಬಂದಿದ್ದು, ದಕ್ಷಿಣ ಕೋಲ್ಕತದ ಕಾಳಿಘಾಟ್ನಲ್ಲಿದ್ದ ಮಮತಾ ನಿವಾಸದಲ್ಲಿ. ಯಾವಾಗಲೂ ಜನಭರಿತವಾಗಿ ತುಂಬಿತುಳುಕುತಿದ್ದ ಅವರ ನಿವಾಸದ ಸುತ್ತಮುತ್ತ ಕೆಲವೇ ಕೆಲವು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಾಣುತ್ತಿದ್ದರು. ಉಳಿದಂತೆ ಎಲ್ಲೆಡೆ ಮೌನವಷ್ಟೇ ಇತ್ತು.
ಸಿಂಗೂರ್ನಲ್ಲೇ ಬರಸಿಡಿಲು: 10 ವರ್ಷದ ಹಿಂದೆ ಹೂಗ್ಲಿ ಜಿಲ್ಲೆಯ ಸಿಂಗೂರ್ನಲ್ಲಿ ಮಮತಾ ಬ್ಯಾನರ್ಜಿ ಟಾಟಾ ಸಂಸ್ಥೆಯ ನ್ಯಾನೊ ಕಾರು ಘಟಕದ ವಿರುದ್ಧ ಭಾರೀ ಹೋರಾಟ ಮಾಡಿದ್ದರು. ಅದರ ಪರಿಣಾಮ ಇಡೀ ಬಂಗಾಳ ದಲ್ಲಿ ಟಿಎಂಸಿ ಹವಾ ಎದ್ದು, ಮಮತಾ ಒಂದೇ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರು. ಇದೀಗ ಸಿಂಗೂರ್ ಇರುವ ಹೂಗ್ಲಿಯಲ್ಲೇ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 2014ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟಿಎಂಸಿ ರತ್ನಾ ಡೆ ತೀವ್ರ ಕುಸಿತ ಅನುಭವಿಸಿದ್ದಾರೆ
ಗೆದ್ದ ಪ್ರಮುಖರು
-ಬಾಬುಲ್ ಸುಪ್ರಿಯೊ, ಅಸಾನ್ಸೊಲ್
-ಅಭಿಷೇಕ್ ಬ್ಯಾನರ್ಜಿ,
-ಡೈಮಂಡ್ ಹಾರ್ಬರ್
-ದಿಲೀಪ್ ಘೋಷ್, ಮೇದಿನಿಪುರ
-ರಾಜು ಬಿಸ್ತಾ, ಡಾರ್ಜಿಲಿಂಗ್
-ಸೌಗತ ರಾಯ್, ಡಮ್ ಡಮ್
ಸೋತ ಪ್ರಮುಖರು
-ಎಸ್.ಎಸ್.ಅಹ್ಲುವಾಲಿಯಾ, ಬುದ್ವಾìನ್ ದುರ್ಗಾಪುರ
-ರಾಹುಲ್ ಸಿನ್ಹಾ, ಕೋಲ್ಕತ ಉತ್ತರ
-ಅಮರ್ ಸಿಂಗ್ ರೈ, ಡಾರ್ಜಿಲಿಂಗ್
-ಮನಸ್ ರಂಜನ್, ಮೇದಿನಿಪುರ
-ಮಫುಜಾ ಖಾತುನ್, ಜಂಗಿಪುರ
ಗೆದ್ದವರಿಗೆ ಶುಭಾಶಯಗಳು. ಆದರೆ ಎಲ್ಲ ಸೋತವರು ಸೋತಿಲ್ಲ. ನಾವು ಎಲ್ಲವನ್ನೂ ಸಂಪೂರ್ಣವಾಗಿ ಪರಾಮರ್ಶೆ ನಡೆಸಬೇಕಾಗಿದೆ. ನಂತರ ಪ್ರತಿಕ್ರಿಯಿಸುತ್ತೇನೆ.
-ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕ, ಬಂಗಾಳ ಮುಖ್ಯಮಂತ್ರಿ
ಆರಂಭದಲ್ಲಿ ಟಿಎಂಸಿ ವಿರೋಧಿ ಅಲೆಯ ಸುಳಿವು ಇತ್ತು. ಭಯಭೀತ ವಾತಾವರಣದ ನಡುವೆಯೇ ಬಂಗಾಳದಲ್ಲಿ ಜನರು ಬಿಜೆಪಿಯತ್ತ ಒಲವು ತೋರಿದ್ದಾರೆ. ಇದು ನರೇಂದ್ರ ಮೋದಿ ನಾಯಕತ್ವಕ್ಕೆ ಸಿಕ್ಕ ಜಯ.
-ಕೈಲಾಶ್ ವಿಜಯವರ್ಗೀಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ