ಪಶ್ಚಿಮ ಬಂಗಾಲದ ನಾದಿಯಾ ಜಿಲ್ಲೆಯಲ್ಲಿ ಯುವ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ
Team Udayavani, May 25, 2019, 3:49 PM IST
ಕಲ್ಯಾಣಿ, ಪಶ್ಚಿಮ ಬಂಗಾಲ : 23 ವರ್ಷದ ಬಿಜೆಪಿ ಕಾರ್ಯಕರ್ತನನ್ನು ಪಶ್ಚಿಮ ಬಂಗಾಲದ ನಾದಿಯಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ಇಂದು ಶನಿವಾರ ತಿಳಿಸಿದ್ದಾರೆ.
ಛಕ್ ದಾಹಾ ಪಟ್ಟಣದಲ್ಲಿ ನಿನ್ನೆ ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆಯಿತು.
ಚಕ್ ದಾಹಾ ಪಟ್ಟಣದ ತಪಬನ್ ಪ್ರದೇಶದ ನಿವಾಸಿ, 23ರ ಹರೆಯದ ಸಂತು ಘೋಷ್, ತನಗೆ ಫೋನ್ ಕರೆ ಬಂದುದನ್ನು ಅನುಸರಿಸಿ ಮನೆಯಿಂದ ಹೊರಗೆ ಹೋದಾಗ ಆತನನ್ನು ಅತ್ಯಂತ ಸನಿಹದಿಂದ ಗುಂಡಿಟ್ಟು ಕೊಲ್ಲಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸಂತು ಘೋಷ್ ನನ್ನು ಒಡನೆಯೇ ಛಕ್ದಾಹಾ ಸರಕಾರಿ ಅಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಅದಕ್ಕೆ ಮೊದಲೇ ಅಸುನೀಗಿದ್ದುದಾಗಿ ವೈದ್ಯರು ಪ್ರಕಟಿಸಿದರು.
ಘಟನೆಯನ್ನು ಅನುಸರಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 34ರಲ್ಲಿ ರಾಸ್ತಾ ರೋಕೋ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ನಾದಿಯಾ ಜಿಲ್ಲೆಯ ಅನೇಕ ಕಡೆಗಳಲ್ಲಿ ರೈಲು ಹಳಿಗಳನ್ನು ಕೂಡ ಬ್ಲಾಕ್ ಮಾಡಿದರು.
ಪೊಲೀಸರು ಕೊಲೆ ಕೇಸು ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ಮೊಬೈಲ್ ಫೋನ್ ಅವರಿಗೆ ಸಿಕ್ಕಿದೆ. ಆ ಪ್ರಕಾರ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದ್ದಾರೆ.
ಸಂತು ಘೋಷ್ ಲೋಕಸಭಾ ಚುನಾವಣೆಗೆ ಮುನ್ನ ತೃಣ ಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎಂದು ಮೂಲಗಳು ತಿಳಿಸಿವೆ. ಈತನ ಕೊಲೆಯ ಹಿಂದೆ ತೃಣಮೂಲ ಕಾಂಗ್ರೆಸ್ ಇದೆ ಎಂದುನಾದಿಯಾ ಬಿಜೆಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಕ್ ಸರ್ಕಾರ್ ಆರೋಪಿಸಿದ್ದಾರೆ. ಟಿಎಂಸಿ ನಾಯಕರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.
ಘಟನೆ ನಡೆದ ತಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಿಡಲು ಕೇಂದ್ರೀಯ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.