ಮಧ್ಯಸ್ಥಿಕೆ ವಹಿಸುವೆ, ಶಿವಸೇನಾ ಜತೆ 50:50 ಸೂತ್ರದ ಚರ್ಚೆ ನಡೆದಿಲ್ಲ; ನಿತಿನ್ ಗಡ್ಕರಿ
Team Udayavani, Nov 8, 2019, 3:36 PM IST
ನವದೆಹಲಿ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಅಧಿಕಾರ ಹಂಚಿಕೆಯಲ್ಲಿ 50:50 ಸೂತ್ರದ ಕುರಿತು ಶಿವಸೇನಾ ಜತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರ ಮುಂಬೈಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ರಚನೆ ಬಗ್ಗೆ ಎರಡೂ ಪಕ್ಷಗಳ ನಡುವೆ ಮಧ್ಯಸ್ಥಿಕೆ ನಡೆಸಲು ಸಿದ್ಧ. ಆದರೆ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗಿ ಬಿಜೆಪಿ ಸರ್ಕಾರ ರಚನೆಯಾಗುವುದಾದರೆ ಮಾತ್ರ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ನನಗೆ ತಿಳಿದಿರುವಂತೆ ಚುನಾವಣಾ ಪೂರ್ವದಲ್ಲಿ ಶಿವಸೇನಾ ಜತೆ 50:50 ಸೂತ್ರದಡಿ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಯಾವ ಪಕ್ಷ ಹೆಚ್ಚು ಶಾಸಕರನ್ನು ಹೊಂದಿದೆಯೋ ಆ ಪಕ್ಷದವರೇ ಮುಖ್ಯಮಂತ್ರಿಯಾಗಬೇಕು ಎಂದು ಬಾಳಾ ಸಾಹೇಬ್ ಠಾಕ್ರೆ ಕೂಡಾ ಹೇಳಿರುವುದಾಗಿ ಗಡ್ಕರಿ ಈ ಸಂದರ್ಭದಲ್ಲಿ ಹೇಳಿದರು.