ಲಕ್ಷಾಂತರ ರೂ. ಹಣ ದೋಚಿದ ನಂತರ ಕಾರಿನೊಳಗೆ ಉದ್ಯಮಿ ಜೀವಂತ ದಹನ!
ನಂಬರ್ ಪ್ಲೇಟ್ ಮೂಲಕ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಸಂಬಂಧಿಕರಿಗೆ ಮಾಹಿತಿ ನೀಡಲಾಗಿತ್ತು
Team Udayavani, Oct 8, 2020, 2:03 PM IST
Representative Image
ಹರ್ಯಾಣ/ಹಿಸಾರ್: ಕೆಲವು ಅಪರಿಚಿತ ದುಷ್ಕರ್ಮಿಗಳು ಉದ್ಯಮಿಯ 11 ಲಕ್ಷ ರೂಪಾಯಿ ಹಣವನ್ನು ದೋಚಿದ ನಂತರ ಕಾರನ್ನು ಲಾಕ್ ಮಾಡಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಈ ಘಟನೆ ಹಿಸಾರ್ ಜಿಲ್ಲೆಯ ಹನ್ಸಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿತ್ತು. ಡಾಟಾ ಗ್ರಾಮದ ಉದ್ಯಮಿ ರಾಮ್ ಮೆಹರ್ (35ವರ್ಷ) ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದರೋಡೆಕೋರರು ತಡೆದು ನಿಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉದ್ಯಮಿ ಬಳಿ ಇದ್ದ 11 ಲಕ್ಷ ರೂಪಾಯಿ ದೋಚಿಕೊಂಡು, ಕಾರಿನೊಳಗೆ ಕೂಡಿ ಹಾಕಿ ಹೊರಗಿನಿಂದ ಲಾಕ್ ಮಾಡಿ ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಕಾರಿನೊಳಗೆ ಸುಟ್ಟು ಕರಕಲಾಗಿದ್ದ ಮೆಹರ್ ಶವ ಪತ್ತೆಯಾಗಿತ್ತು. ಕಾರಿನ ನಂಬರ್ ಪ್ಲೇಟ್ ಮೂಲಕ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಸಂಬಂಧಿಕರಿಗೆ ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹರ್ಯಾಣದ ಬಾರ್ವಾಲಾ ಎಂಬಲ್ಲಿ ಮೆಹರ್ ಅವರ ಫ್ಯಾಕ್ಟರಿ (ಯೂಸ್ ಆ್ಯಂಡ್ ಥ್ರೋ ಕಪ್ಸ್ ಮತ್ತು ಪ್ಲೇಟ್ ತಯಾರಿಕೆ) ಇದ್ದು, ಬ್ಯಾಂಕ್ ನಲ್ಲಿ 11 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಹಿಸಾರ್ ನಿಂದ ಡಾಟಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು ಎಂದು ಹತ್ಯೆಗೀಡಾದ ಮೆಹರ್ ಕುಟುಂಬದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.