ಹೊಸ ಪಕ್ಷ ಕಟ್ಟಲು ಮುಂದಾದ ಕ್ಯಾಪ್ಟನ್ ಅಮರೀಂದರ್?
Team Udayavani, Oct 1, 2021, 8:14 AM IST
ನವದೆಹಲಿ/ಚಂಡಿಗಡ: ಇತ್ತೀಚೆಗಷ್ಟೇ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕ್ಯಾ.ಅಮರೀಂದರ್ ಸಿಂಗ್ ಅವರು ಹೊಸ ಪಕ್ಷ ಕಟ್ಟಲಿದ್ದಾರಾ? ಅವರ ಮಾತುಗಳ ಧಾಟಿ ನೋಡಿದರೆ ಸದ್ಯದಲ್ಲೇ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸಾಧ್ಯತೆ ಎದ್ದು ಕಾಣುತ್ತಿದೆ.
ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಕ್ಯಾ.ಅಮರೀಂದರ್ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಗುರುವಾರ ಈ ಊಹಾಪೋಹಗಳಿಗೆ ಸ್ವತಃ ಅಮರೀಂದರ್ ಅವರೇ ತೆರೆ ಎಳೆದಿದ್ದು, “ನಾನು ಕಾಂಗ್ರೆಸ್ನಿಂದ ಹೊರಬರುವುದು ಖಚಿತ. ಆದರೆ, ಬಿಜೆಪಿಗೆ ಹೋಗುವುದಿಲ್ಲ’ ಎಂದಿದ್ದಾರೆ.
30 ಶಾಸಕರ ಬೆಂಬಲ: “ಕಾಂಗ್ರೆಸ್ ನನಗೆ ಅತೀವ ಅವಮಾನ ಮಾಡಿದೆ. ನನ್ನ ಮೇಲೆ ಪಕ್ಷ ನಂಬಿಕೆಯಿಡಲಿಲ್ಲ. ಹೀಗಾಗಿ, ನಾನು ಆ ಪಕ್ಷದಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಹಾಗಂತ, ಬಿಜೆಪಿಗೂ ಸೇರ್ಪಡೆಯಾಗುವುದಿಲ್ಲ. ನನಗೆ ಪಂಜಾಬ್ನ ಭದ್ರತೆಯೇ ಆದ್ಯತೆಯಾಗಿರುವ ಕಾರಣ, ನನ್ನ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇತರೆ ಆಯ್ಕೆಗಳತ್ತ ನೋಡುತ್ತಿದ್ದೇನೆ’ ಎಂದು ಕ್ಯಾ. ಅಮರೀಂದರ್ ಹೇಳಿದ್ದಾರೆ.
ಈ ಮೂಲಕ ಹೊಸ ಪಕ್ಷ ಸ್ಥಾಪನೆಯ ಸುಳಿವು ಕೊಟ್ಟಿದ್ದಾರೆ. 10-15 ದಿನಗಳಲ್ಲೇ ಅವರು ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಕಾಂಗ್ರೆಸ್ನ 25-30 ಶಾಸಕರ ಬೆಂಬಲ ಅವರಿಗಿದೆ ಎಂದು ಹೇಳಲಾಗಿದೆ. ಮುಂದಿನ ವರ್ಷವೇ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ನವದೆಹಲಿಯಲ್ಲಿ ಬುಧವಾರ ಮತ್ತು ಗುರುವಾರ ಅಮರೀಂದರ್ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ರನ್ನು ಭೇಟಿಯಾಗಿದ್ದರು.
ಸಿಧು ರಾಜೀನಾಮೆ ವಾಪಸ್?
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನವ್ ಜೋತ್ ಸಿಂಗ್ ಸಿಧು ಅವರೇ ಮುಂದುವರಿ ಯುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಚರಣ್ ಜಿತ್ ಸಿಂಗ್ ಛನ್ನಿ ಮತ್ತು ಸಿಧು ನಡುವಿನ ಮಾತುಕತೆ ಯಲ್ಲಿ ಪ್ರಸ್ತಾಪವಾಗಿದೆ. ಡಿಜಿಪಿ ನೇಮಕ, ಸಂಪುಟ ದಲ್ಲಿ ಕಳಂಕಿತ ನಾಯಕರಿಗೆ ಸ್ಥಾನ ನೀಡಿರುವ ಬಗ್ಗೆ ಸೇರಿದಂತೆ ಸಿಧು ಎತ್ತಿರುವ ಆಕ್ಷೇಪಗಳಿಗೆ ಸೂಕ್ತವಾಗಿ ಸ್ಪಂದಿಸುವ ಬಗ್ಗೆ ಸಿಎಂ ಛನ್ನಿ ಒಪ್ಪಿಕೊಂಡಿ ದ್ದಾರೆ.
ಅ.4ರಂದು ರಾಜ್ಯ ಸಂಪುಟ ಸಭೆ ನಡೆಯಲಿದ್ದು, ಆಗ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಮಾತುಕತೆ ಬಳಿಕ ಮಾತನಾಡಿ ಶಾಸಕ ಗುರುದೀಪ್ ಸಿಂಗ್ ಶಾಪಿನಿ ಸಿಧು ರಾಜಿನಾಮೆ ವಾಪಸ್ ಪಡೆಯಲು ಒಪ್ಪಿದ್ದಾರೆ ಎಂದರು.
ಟ್ವಿಟರ್ ಪ್ರೊಫೈಲ್ ಬದಲು
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕ್ಯಾ. ಅಮರೀಂದರ್ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಅನ್ನು ಬದಲಿಸಿದ್ದಾರೆ. “ನಿವೃತ್ತ ಸೇನಾಧಿಕಾರಿ, ಪಂಜಾಬ್ನ ಮಾಜಿ ಸಿಎಂ, ರಾಜ್ಯಕ್ಕಾಗಿ ಸೇವೆಯ ಮುಂದುವರಿಕೆ’ ಎಂದು ಬರೆದುಕೊಂಡಿದ್ದಾರೆ. ಎಲ್ಲೂ ಕಾಂಗ್ರೆಸ್ ಪಕ್ಷದ ಕುರಿತು ಉಲ್ಲೇಖ ಮಾಡಿಲ್ಲ. ಮತ್ತೂಂದೆಡೆ ಭಾರತೀಯ ಫುಟ್ಬಾಲ್ ತಂಡದ ಗೋಲ್ಕೀಪರ್ ಅ ದರ್ ಸಿಂಗ್ ಅವರಿಗೆ ಹೊಸ ಸಮಸ್ಯೆ ಎದುರಾಗಿದೆ. ಮಾಜಿ ಸಿಎಂ ಅಮರೀಂದರ್ ಸಿಂಗ್ ಅವರಿಗೆ ಎಂದು ಟ್ಯಾಗ್ ಮಾಡಿ, ಕೆಲವು ಪತ್ರಕರ್ತರು ಟ್ವೀಟ್ ಮಾಡಿರುವುದು ಫುಟ್ಬಾಲ್ ಆಟಗಾರನಿಗೆ ತಪ್ಪಾಗಿ ತಲುಪಿದೆ. ಹೀಗಾಗಿ, “ನಾನು ಪಂಜಾಬ್ನ ಮಾಜಿ ಸಿಎಂ ಅಲ್ಲ. ಭಾರತೀಯ ಫುಟ್ಬಾಲ್ ತಂಡದ ಗೋಲ್ಕೀಪರ್ ಅಮರೀಂದರ್ ಸಿಂಗ್. ದಯ ವಿಟ್ಟು ನನಗೆ ಟ್ಯಾಗ್ ಮಾಡಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.