ಕಾವೇರಿ ನೀರಿನ ಪ್ರಮಾಣ ಇಳಿಕೆ ಸರಿಯಲ್ಲ: ಪಳನಿಸ್ವಾಮಿ
Team Udayavani, Feb 18, 2018, 8:15 AM IST
ಕೊಯಮತ್ತೂರು: ತಮಿಳುನಾಡಿಗೆ ಕಾವೇರಿ ನದಿ ನೀರಿನ ಪ್ರಮಾಣವನ್ನು ಸುಪ್ರೀಂಕೋರ್ಟ್ ಕಡಿಮೆ ಮಾಡಿದ್ದಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ, ನ್ಯಾಯಪೀಠವು ತೀರ್ಪಿನಲ್ಲಿ ಉಲ್ಲೇಖೀಸಿರುವ ಕೆಲವು ಅಂಶಗಳು ಸ್ವಾಗ ತಾರ್ಹ ಎಂದು ಅವರು ಹೇಳಿದ್ದಾರೆ. ಯಾವುದೇ ರಾಜ್ಯ ನದಿ ಮೇಲೆ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದು ಸರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಂದಿನ ಕ್ರಮದ ಬಗ್ಗೆ ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದೂ ಪಳನಿಸ್ವಾಮಿ ಹೇಳಿದ್ದಾರೆ.
ಮಂಡಳಿ ರಚನೆಗೆ ಒತ್ತಡ ಹೇರಬೇಕು: ಈ ನಡುವೆ ಪುದುಚೇರಿಯ ಎಐಎಡಿಎಂಕೆ ಘಟಕ ರಾಜ್ಯ ಸರಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲೂಎಂಬಿ) ರಚನೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಪುದು ಚೇರಿ ಕಾಂಗ್ರೆಸ್ ಸರಕಾರ ತಮಿಳುನಾಡು ಸರಕಾರದ ಜತೆಗೆ ಕೈಜೋಡಿಸಬೇಕು ಎಂದು ಪ್ರತಿಪಾದಿಸಿದೆ.