ಆಂಧ್ರಕ್ಕೆ ಇನ್ನು ಸಿಬಿಐ ಕಾಲಿಡುವಂತಿಲ್ಲ; ಕೇಂದ್ರಕ್ಕೆ TDP ಪ್ರಹಾರ
Team Udayavani, Nov 16, 2018, 3:31 PM IST
ಅಮರಾವತಿ : ಕೇಂದ್ರ ಸರಕಾರಕ್ಕೆ ನೀಡಲಾಗಿರುವ ಪ್ರಹಾರ ಎನ್ನುವಂತೆ ಆಂಧ್ರ ಪ್ರದೇಶ ಸರಕಾರ ಇಂದು ಶುಕ್ರವಾರ ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆಯ ಸದಸ್ಯರಿಗೆ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಅಧಿಕಾರ ಚಲಾಯಿಸಲು ತಾನು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂದೆಗೆದುಕೊಂಡಿದೆ.
1946ರ ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯಿದೆಯಡಿ ರೂಪಿಸಲಾಗಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI) ಇನ್ನು ಮುಂದೆ ಆಂಧ್ರ ಪ್ರದೇಶದ ವ್ಯಾಪ್ತಿಯೊಳಗೆ ತನ್ನ ತನಿಖಾಧಿಕಾರವನ್ನು ಚಲಾಯಿಸುವಂತಿಲ್ಲ.
ಆಂಧ್ರ ಪ್ರದೇಶ ಸರಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಸಿಬಿಐ ಇನ್ನು ಮುಂದೆ ರಾಜ್ಯ ವ್ಯಾಪ್ತಿಯಲ್ಲಿ ಯಾವುದೇ ದಾಳಿ ನಡೆಸುವಂತಿಲ್ಲ; ಮಾತ್ರವಲ್ಲ ಯಾವುದೇ ಅಧಿಕೃತ ಕೆಲಸ ಕಾರ್ಯಗಳನ್ನು ನಡೆಸುವುದಕ್ಕೆ ರಾಜ್ಯ ಸರಕಾರದ ಪೂರ್ವಾನುಮತಿಯನ್ನು ಪಡೆಯಬೇಕಾಗುತ್ತದೆ.
ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸಿಬಿಐ ಕೈಗೊಳ್ಳುವ ಕೆಲಸ ಕಾರ್ಯ, ತನಿಖೆ, ದಾಳಿ ಇತ್ಯಾದಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಗೊಳ್ಳಲಿದೆ.
ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಈ ಕ್ರಮದ ಪರಿಣಾಮವಾಗಿ ಆಂಧ್ರ ಪ್ರದೇಶ ವ್ಯಾಪ್ತಿಯೊಳಗಿನ ಯಾವುದೇ ಕೇಂದ್ರ ಸರಕಾರಿ ಕಾರ್ಯಾಲಯಗಳ ಮೇಲೆ, ಶಂಕೆಯ ಪ್ರಕರಣಗಳಲ್ಲಿ ದಾಳಿ, ಶೋಧ ಕಾರ್ಯ ನಡೆಸಬಹುದಾಗಿದೆ.
ಸಿಬಿಐ ನಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟಿಡಿಪಿ ಲಂಕಾ ದಿನಕರ್ ಹೇಳಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರಕಾರ ಸಿಬಿಐ ಅನ್ನು ರಾಜಕೀಯ ವಿರೋಧಿಗಳ ವಿರುದ್ಧ ಅಸ್ತ್ರವನ್ನಾಗಿ ಬಳಸುತ್ತಿರುವ ಕಾರಣ ಸಿಬಿಐ ನ ಸ್ವಾಯತ್ತೆ ನಷ್ಟವಾಗಿದೆ ಎಂದು ದಿನಕರ್ ಹೇಳಿದ್ದಾರೆ.