ನ್ಯೂಯಾರ್ಕ್ನಲ್ಲಿ ಹಸಿವಿನ ಅರಿವು ; ದೇಶದ ಗೌರವ ಎತ್ತಿಹಿಡಿದ ವಿಕಾಸ್ ಖನ್ನಾ
ಬಿಬಿಸಿ ನಿರೂಪಕನ ಕೊಂಕು ಪ್ರಶ್ನೆಗೆ ಸ್ಟಾರ್ ಶೆಫ್ ಉತ್ತರ
Team Udayavani, Jun 29, 2020, 8:06 AM IST
ಹೊಸದಿಲ್ಲಿ: ಎಷ್ಟೋ ಬಾರಿ ದೇಶಾಭಿಮಾನದಿಂದ ನಾವಾಡುವ ಒಂದೇ ಒಂದು ಮಾತು ದೇಶದ ಗೌರವವನ್ನು ಎತ್ತಿಹಿಡಿಯುತ್ತದೆ. ಜೊತೆಗೆ ಶ್ಲಾಘನೆಯ ಮಹಾಪೂರವನ್ನೇ ಹರಿಸಿಬಿಡುತ್ತದೆ. ಅಂತಹ ಗೌರವದ ಮಾತನಾಡಿ ಶ್ಲಾಘನೆಗೆ ಒಳಗಾದವರು ಮಿಶೆಲಾನ್ ಸ್ಟಾರ್ ಶೆಫ್ ವಿಕಾಸ್ ಖನ್ನಾ.
ಭಾರತ ಮೂಲದವರಾಗಿರುವ 48 ವರ್ಷದ ವಿಕಾಸ್, ಕೋವಿಡ್ ಲಾಕ್ಡೌನ್ ಜಾರಿಯಾದಾಗಿನಿಂದ ಭಾರತದಲ್ಲಿನ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಹಾಗೂ ಕುಷ್ಠರೋಗ ಕೇಂದ್ರಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಹೀಗಾಗಿ ವಿಡಿಯೋ ಕಾಲ್ ಮೂಲಕ ಅವರ ಸಂದರ್ಶನ ಮಾಡುತ್ತಿದ್ದ ಬಿಬಿಸಿ ವರ್ಲ್ಡ್ ನ್ಯೂಸ್ ನಿರೂಪಕ, “ನೀವು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರಿಗಾಗಿ ಆಹಾರ ತಯಾರಿಸಿದ್ದೀರ, ಗೋರ್ಡನ್ ರಾಮ್ಸಯ್ ಜೊತೆ ಟಿವಿ ಶೋನಲ್ಲಿ ಕೂಡ ಭಾಗವಹಿಸಿದ್ದೀರ. ಆದರೆ, ನೀವು ಭಾರತದ ಬಡ ಕುಟುಂಬದಿಂದ ಬಂದವರು. ಭಾರತದಲ್ಲಿ ಆಹಾರದ ಅಭದ್ರತೆ ಅನುಭವಿಸಿದ್ದರಿಂದ ನಿಮ್ಮಲ್ಲಿ ಈ ಸೇವಾ ಮನೋಭಾವ ಮೂಡಿತಾ?’ ಎಂದು ಕೇಳುತ್ತಾನೆ.
ಇದಕ್ಕೆ ಉತ್ತರಿಸುವ ವಿಕಾಸ್, “ನಾನು ಪಂಜಾಬ್ನ ಅಮೃತಸರದವನು. ಅಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲುವುದಿಲ್ಲ. ಏಕೆಂದರೆ ಅಲ್ಲಿ “ಲಂಗರ್’ (ಸಿಖ್ಬರ ಉಚಿತ ಅನ್ನದಾನ) ಮೂಲಕ ಪ್ರತಿಯೊಬ್ಬರಿಗೂ ಆಹಾರ ದೊರೆಯುತ್ತದೆ. ನನಗೆ ನಿಜವಾದ ಹಸಿವಿನ ಅರಿವಾದದ್ದು ನ್ಯೂಯಾರ್ಕ್ ನಗರದಲ್ಲಿ,’ ಎಂದು ಹೇಳುತ್ತಾರೆ.
ನೇರ ಪ್ರಸಾರವಾದ ಈ ಸಂದರ್ಶನದ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿದೆ. ನೂರಾರು ಮಂದಿ ಈ ವಿಡಿಯೋ ಟ್ವೀಟ್ ಮಾಡಿದ್ದು, ಸಾವಿರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಜೊತೆಗೆ ಲಕ್ಷಾಂತರ ಜನ ವಿಕಾಸ್ ಖನ್ನಾರ ದೇಶಾಭಿಮಾನವನ್ನು ಕೊಂಡಾಡಿದ್ದಾರೆ.