ಮುಖ್ಯಮಂತ್ರಿ ಚೌಹಾಣ್ಗೆ 9ನೇ ದಿನವೂ ಪಾಸಿಟಿವ್
Team Udayavani, Aug 4, 2020, 8:42 AM IST
ಭೋಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ಗೆ ನರ್ಸ್ ಸೋಮವಾರ ರಾಖಿ ಕಟ್ಟಿದರು.
ಭೋಪಾಲ/ಚೆನ್ನೈ: ಕೋವಿಡ್ ದೃಢ ಪಟ್ಟ ಹಿನ್ನೆಲೆಯಲ್ಲಿ ಜು.25ರಿಂದಲೇ ಭೋಪಾಲ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ಗೆ 9ನೇ ದಿನದ ಪರೀಕ್ಷೆಯಲ್ಲೂ ಕೋವಿಡ್ ಪಾಸಿಟಿವ್ ಎಂದೇ ವರದಿ ಬಂದಿದೆ. ಹೀಗಾಗಿ, ಇನ್ನೂ ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಅವರು ಆರೋಗ್ಯಯುತವಾಗಿದ್ದು, ಯಾವುದೇ ರೋಗಲಕ್ಷಣ ಕಂಡು ಬಂದಿಲ್ಲ. ವರದಿ ನೆಗೆಟಿವ್ ಬಂದೊಡನೆ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದೂ ಮಿಶ್ರಾ ಹೇಳಿದ್ದಾರೆ.
ಚಿದು ಪುತ್ರಗೆ ಸೋಂಕು: ಇದೇ ವೇಳೆ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ, ಸಂಸದ ಕಾರ್ತಿ ಚಿದಂಬರಂ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಕುರಿತು ಸೋಮವಾರ ಅವರೇ ಟ್ವಿಟರ್ ಮೂಲಕ ವಿಚಾರ ತಿಳಿಸಿದ್ದು, ಅಲ್ಪಪ್ರಮಾಣದ ರೋಗಲಕ್ಷಣದೊಂದಿಗೆ ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಪ್ರಸ್ತುತ ನಾನು ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಸೂಕ್ತ ಮಾರ್ಗ ಸೂಚಿ ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಸಚಿವ ಪ್ರಸಾದ್ಗೆ ಕ್ವಾರಂಟೈನ್: ಕೇಂದ್ರ ಐಟಿ ಮತ್ತು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಭಾನುವಾರದಿಂದಲೇ ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದಾರೆ. ಶನಿವಾರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದರು. ಭಾನುವಾರವಷ್ಟೇ ಶಾ ಅವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಪ್ರಸಾದ್ ಕ್ವಾರಂಟೈನ್ನಲ್ಲಿರಲು ನಿರ್ಧರಿಸಿದ್ದಾರೆ.